ವರದಿ : ಶಫೀ ಉಚ್ಚಿಲ
ಕಾಪು: ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಜೇಸಿಐ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಅವರ ಫೇಸ್ ಬುಕ್ ಅಕೌಂಟ್ ಅನ್ನು ಹ್ಯಾಕ್ ಮಾಡಿ, ಅವರ ಸ್ನೇಹಿತರ ಬಳಿ ವಂಚಕರು ಹಣಕ್ಕೆ ಬೇಡಿಕೆಯಿರಿಸಿ ಸಂದೇಶ ಕಳುಹಿಸಿರುವ ಘಟನೆ ಶುಕ್ರವಾರ ನಡೆದಿದೆ.
ಫೇಸ್ ಬುಕ್ ನಲ್ಲಿ ರಾಕೇಶ್ ಕುಂಜೂರು ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವ ವಂಚಿಸಿರುವ ವಂಚಕ, ಅದೇ ಖಾತೆಯಲ್ಲಿ ಫ್ರೆಂಡ್ ರಿಕ್ವೆಸ್ಟ್ ಎಸೆಫ್ಟ್ ಮಾಡಿದ ಹಲವು ಮಂದಿ ಸ್ನೇಹಿತರ ಜೊತೆ ಚಾಟ್ ಮಾಡಿ, ಗೂಗಲ್ ಪೇ ಮೂಲಕ ಹಣ ಕಳುಹಿಸಿಕೊಡುವಂತೆ ಒತ್ತಾಯಿಸಿದ್ದಾನೆ.

ಈ ಬಗ್ಗೆ ರಾಕೇಶ್ ಬಳಿ ಅವರ ಸ್ನೇಹಿತರು ಕರೆ ಮಾಡಿ ಫೇಸ್ ಬುಕ್ ನಲ್ಲಿ ನಿಮ್ಮ ಹೊಸ ಖಾತೆ ತೆರೆದಿದ್ದೀರಾ, ಅದರಿಂದ ಹಣಕ್ಕಾಗಿ ಮನವಿ ಬರುತ್ತಿದೆ ಎಂದು ತಿಳಿಸಿದ್ದು, ಆಗ ಫೇಸ್ ಬುಕ್ ಖಾತೆ ಹ್ಯಾಕ್ ಆಗಿ, ವಂಚನೆಗೊಳಗಾಗಿರುವ ವಿಚಾರ ತಿಳಿದು ಬಂದಿತ್ತು.
ಫೇಸ್ ಬುಕ್ ನಲ್ಲಿ ತನ್ನ ಹೆಸರಿನಲ್ಲಿ ಯಾರೋ ಅಪರಿಚಿತರು ಹೊಸ ಅಕೌಂಟ್ ಕ್ರಿಯೇಟ್ ಮಾಡಿ, ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಹಣಕ್ಕಾಗಿ ಮನವಿ ಮಾಡುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ಯಾರಾದರೂ ಹಣ ಕೇಳಿದರೆ ಅದಕ್ಕೆ ಸ್ಪಂದಿಸದಿರಿ ಎಂದು ರಾಕೇಶ್ ಕುಂಜೂರು ಮನವಿ ಮಾಡಿದ್ದಾರೆ.
ನಕಲಿ ಫೇಸ್ ಬುಕ್ ಖಾತೆ ಕ್ರಿಯೇಟ್ ಆದರೆ ಹೀಗೆ ಮಾಡಿ
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿಯ ಫೇಸ್ ಬುಕ್ ನಕಲಿ ಖಾತೆ ತೆರೆದು, ಆ ಮೂಲಕ ಹಣಕ್ಕಾಗಿ ಬೇಡಿಕೆ ಇರಿಸುವುದು ಮಾಮೂಲಾಗಿದೆ. ಒಂದು ವೇಳೆ ಹೀಗೆ ಯಾರಿಗಾದರೂ ಆದರೆ ಅದೇ ಹೊಸ ಅಕೌಂಟ್ ನ ಒಳಗೆ ಹೋಗಿ, ಬಲ ಬದಿಯಲ್ಲಿ ಬರುವ ಮೂರು ಚುಕ್ಕೆಗೆ ಕ್ಲಿಕ್ ಮಾಡಿದಾಗ ರಿಪೋರ್ಟ್ ಎಂದು ಬರುತ್ತದೆ. ರಿಪೋರ್ಟ್ ಗೆ ಕ್ಲಿಕ್ ಮಾಡಿದಾಗ ಅಲ್ಲಿ ಬರುವ ಫೇಕ್ ಅಕೌಂಟ್ ಬರುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಅಪರಿಚಿತರು ಮಾಡುವ ನಕಲಿ ಖಾತೆ ಬ್ಲಾಕ್ ಆಗುತ್ತದೆ. ಇದನ್ನು ಸಾರ್ವಜನಿಕರು ಗಮನಿಸಬಹುದಾಗಿದೆ.

