ಬ್ರಹ್ಮಾವರ: ಕೋವಿಡ್ ಸಂದಿಗ್ಧ ಕಾಲದಲ್ಲಿ ಕ್ಷಯ ರೋಗಿಗಳ ಮನೆ ಭೇಟಿ ಕಷ್ಟವಾದ ಹಿನ್ನೆಲೆಯಲ್ಲಿ ಬ್ರಹ್ಮಾವರ ತಾಲೂಕು ಕ್ಷಯ ಘಟಕದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ಪತ್ರೆ ಯ ಕ್ಷಯ ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮತ್ತು ಕ್ಲಪ್ತ ಸಮಯದಲ್ಲಿ ಔಷಧ ಸಿಗುವಂತೆ ಮತ್ತು ಕ್ಷಯ ರೋಗಿಗಳ ಕುಂದುಕೊರತೆಗಳ ಬಗ್ಗೆ ಆಸ್ಪತ್ರೆಗೆ ಬರಲು ಕಷ್ಟ ಆಗಿರುವುದರಿಂದ ಇಲಾಖೆಯ ಆದೇಶದಂತೆ ದೂರವಾಣಿ ಕರೆಯ ಮೂಲಕ ಆಪ್ತ ಸಮಾಲೋಚನೆಯನ್ನು ಕೈಗೊಳ್ಳಲಾಗಿದೆ.
ಬ್ರಹ್ಮಾವರ ತಾಲೂಕು ಕ್ಷಯ ಘಟಕದ ಮೇಲ್ವಿಚಾರಕ ಅಲಂದುದೂರು ಮಂಜುನಾಥ್ ಮತ್ತು ಪ್ರಯೋಗಶಾಲಾ ಮೇಲ್ವಿಚಾರಕ ಪ್ರಸಾದ್ ಶೆಟ್ಟಿ ಪ್ರತಿದಿನ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 20 ರಂತೆ ಕ್ಷಯ ರೋಗಿಗಳಿಗೆ ಫೋನ್ ಕರೆ ಮಾಡಿ ವಿಚಾರಿಸಿ ಆಪ್ತ ಸಮಾಲೋಚನೆ ಮಾಡುತ್ತಿದ್ದಾರೆ.

ನಿಕ್ಷಯ್ ಪೋಷನ್ ಅಭಿಯಾನದಡಿಯಲ್ಲಿ ರೋಗಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತಿದ್ದು ಅದನ್ನು ಪೌಷ್ಠಿಕ ಆಹಾರಕ್ಕಾಗಿ ಉಪಯೋಗಿಸಿಕೊಳ್ಳಲು ರೋಗಿಗಳಿಗೆ ಮನವಿ ಮಾಡಿಕೊಳ್ಳಲಾಗುತ್ತಿದೆ. ರೋಗಿಗಳ ಅನುಸರಣಾ ಕಫ ಪರೀಕ್ಷೆ ಮಾಡಿಸುವ ಕುರಿತು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ ವಿವರಣೆಗಳನ್ನು ಪಡೆಯಲಾಗುತ್ತಿದೆ.
ಯಾವುದೇ ಕ್ಷಯ ರೋಗಿಗಳಿಗೆ ಚಿಕಿತ್ಸೆಯಲ್ಲಿ ಮತ್ತು ಇನ್ನಿತರ ಯಾವುದೇ ಸಂದರ್ಭದಲ್ಲಿ ತೊಂದರೆಯಾದರೆ 9481978138 ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
