ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಜಿಲ್ಲಾಧಿಕಾರಿಯವರ ಲಾಕ್ ಡೌನ್ ಕಠಿನ ನಿಯಮದ ಆದೇಶದ ಹಿನ್ನೆಲೆಯಲ್ಲಿ ಹೆಬ್ರಿ ತಹಶೀಲ್ದಾರ್ ಪುರಂದರ್ ಕೆ. ಹಾಗೂ ಠಾಣಾಧಿಕಾರಿ ಮಹೇಶ್ T.M ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಅನಗತ್ಯವಾಗಿ ತಿರುಗಾಡುತ್ತಿರುವ ವಾಹನಗಳನ್ನು ಸೀಝ್ ಮಾಡಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಲಾಗಿದೆ.


ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಆಯಾ ಗ್ರಾಮದವರು ದಿನಬಳಕೆ ವಸ್ತುಗಳ ಖರೀದಿಗೆ ಪಕ್ಕದ ಗ್ರಾಮಕ್ಕೆ ವಾಹನಗಳಲ್ಲಿ ತೆರಳುವಂತಿಲ್ಲ. ನಿಮ್ಮ ಮನೆ ಹತ್ತಿರದ ಅಂಗಡಿಗಳಲ್ಲಿ ಖರೀದಿ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಆದರೆ ಜನರು ಸಣ್ಣ ಸಣ್ಣ ವಿಷಯಕ್ಕೆ ಹೆಬ್ರಿ ಪೇಟೆಗೆ ತಮ್ಮ ದ್ವಿಚಕ್ರ ವಾಹನ ಹಾಗೂ ಕಾರಿನಲ್ಲಿ ಬರುತ್ತಿದ್ದರು. ಅಂಥವರ ಮೇಲೆ ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಕೇಸು ದಾಖಲಿಸಿ ವಾಹನಗಳ ಕೀಯನ್ನು ತೆಗೆದು, ಸೀಜ್ ಮಾಡಿ ಕೇಸು ದಾಖಲಿಸಿದ್ದಾರೆ .

ನಾಳೆಯಿಂದ ತುರ್ತು ಕೆಲಸಗಳಿಗೆ ಮಾತ್ರ ವಾಹನಗಳಲ್ಲಿ ಬರಬೇಕು .ಕಾರಣವಿಲ್ಲದೆ ಬಂದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು. ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ನಡೆದುಕೊಂಡೇ ಬರಬೇಕು ಎಂದು ಸಾರ್ವಜನಿಕರಿಗೆ ತಹಶೀಲ್ದಾರ್ ಪುರಂದರ್ ಕೆ. ಖಡಕ್ ಸೂಚನೆ ನೀಡಿದರು.
