ವರದಿ: ಶಫೀ ಉಚ್ಚಿಲ
ಕಾಪು: “ಅಲಯನ್ಸ್ ಟಗ್ ದುರಂತದಲ್ಲಿ ನಾಪತ್ತೆಯಾದ ಇನ್ನಿಬ್ಬರು ಸಿಬ್ಬಂದಿಗಾಗಿ ಬಹಳಷ್ಟು ಶ್ರಮಪಟ್ಟು ಹುಡುಕಾಟ ನಡೆಸಿದ್ದೇವೆ. ಇದುವರೆಗೆ ಮೃತದೇಹಗಳಿರುವ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ” ಎಂದು ಬದ್ರಿಯಾ ತಂಡದ ಮುಖ್ಯಸ್ಥ ಬಿಲಾಲ್ ಮೊಯ್ದಿನ್ ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಬುಧವಾರ ಟಗ್ ನೊಳಗೆ ತುಂಬಿದ್ದ ಮರಳು ಮತ್ತು ನೀರು ತೆರವು ಕಾರ್ಯಾಚರಣೆ ಆರಂಭಗೊಂಡ ಬಳಿಕ ಬಿಲಾಲ್ ಮಾಧ್ಯಮದವರೊಂದಿಗೆ ಮಾತನಾಡಿದರು. “ಮಂಗಳವಾರ ಟಗ್ ಮೇಲಕ್ಕೆತ್ತಲ್ಪಟ್ಟಾಗ ಕ್ಯಾಬಿನ್ ಒಳಭಾಗದಲ್ಲಿ ಪತ್ತೆಯಾದ ಮುಂಬಯಿಯ ಓರ್ವ ಸಿಬ್ಬಂದಿ ಶವ ಹೊರತೆಗೆಯಲಾಗಿತ್ತು. ಬಳಿಕವೂ ಟಗ್ ನಲ್ಲಿ ಸ್ವಲ್ಪ ದುರ್ವಾಸನೆ ಕಂಡು ಬಂದ ಕಾರಣ ಶೋಧ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿ ಹುಡುಕಾಟ ನಡೆಸಿದ್ದೆವು. ಆದರೆ, ಟಗ್ ನಲ್ಲಿ ನೀರು ಮತ್ತು ಮರಳು ತುಂಬಿದ್ದರಿಂದ ಅಡಚಣೆಯಾಗಿ ಕಾರ್ಯಾಚರಣೆ ಸ್ಥಗಿತಗೊಂಡಿತು.
ಈ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯ ಆರಂಭಿಸಿದ್ದು, ಇದುವರೆಗೆ ಶವ ಗೋಚರವಾಗಿಲ್ಲ. ಬೆಳಗ್ಗೆಯೇ ನಮ್ಮ ತಂಡ ಮತ್ತೆ ಹುಡುಕಾಟ ಮುಂದುವರಿಸಿದೆ. ಸಫಲತೆ ಬಳಿಕ ಟಗ್ ಮಂಗಳೂರಿನ ಹಳೆ ಬಂದರಿಗೆ ಎಳೆದೊಯ್ಯುವ ಎಲ್ಲ ಸಿದ್ಧತೆ ನಡೆಸಲಾಗುವುದು” ಎಂದರು.
