ಬೆಂಗಳೂರು : ಭಾರತ ರತ್ನ ಸಿ.ಎನ್.ಆರ್.ರಾವ್ ಅವರು ಅಂತಾರಾಷ್ಟ್ರೀಯ ಪ್ರಶಸ್ತಿ ಇನಿ'(ENI)-2020 ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗೆ ಈ ಪ್ರಶಸ್ತಿ ಅವರಿಗೆ ಒಲಿದಿದೆ. ಇಂಧನ ಕೇಂದ್ರ ಮುಂಚೂಣಿ ಮತ್ತು ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇಂಧನ ಸಂಶೋಧನೆಯ ನೋಬೆಲ್ ಪ್ರಶಸ್ತಿ ಎಂದು
ಇನಿ’ ಪ್ರಶಸ್ತಿಯನ್ನು ಪರಿಗಣಿಸಲಾಗಿದೆ.
ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯಯನ
ಪ್ರೊ.ಸಿ.ಎನ್.ಆರ್.ರಾವ್ ಅವರು ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಇಂಧನ ಮೂಲ ಮಾತ್ರ ಇಡೀ ಮನುಕುಲಕ್ಕೆ ಉಪಯೋಗವಾಗಬಲ್ಲ ಏಕೈಕ ಮೂಲವಾಗಿ ಹೊರ ಹೊಮ್ಮಿದೆ. ಜನ ಜನಕದ ಶೇಖರಣೆ, ದ್ಯುತಿರಸಾಯನ ವಿಜ್ಞಾನ ಮತ್ತು ವಿದ್ಯುದ್ರಸಾಯನ ಕ್ರಿಯೆಯಿಂದಲೂ ಜಲಜನಕ ಉತ್ಪಾದನೆ, ಸೌರಶಕ್ತಿಯಿಂದ ಜಲಜನಕ ಉತ್ಪಾದನೆ, ಹಸಿರು ಜಲಜನಕ ಉತ್ಪಾದನೆ ಹೀಗೆ ಅವರ ಸಂಶೋಧನೆಯ ಪಟ್ಟಿ ಬೆಳೆಯುತ್ತದೆ.

ಇನಿ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ
ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ 1934 ರ ಜೂನ್ 30 ರಂದು ಬೆಂಗಳೂರಿನಲ್ಲಿ ಜನಿಸಿದರು. 1951ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ, 1953ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ, 1958 ರಲ್ಲಿ ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪಡೆದರು. ಇದೀಗ ಇಡೀ ದೇಶವೇ ಅಷ್ಟೇ ಅಲ್ಲದೇ ಏಷ್ಯಾವೇ ಹೆಮ್ಮೆ ಪಡುವಂತಹ ಸಾಧನೆ ಸಿ.ಎನ್.ಆರ್.ರಾವ್ ರದು. ಕಾರಣ ಈ ಪ್ರಶಸ್ತಿ ಪಡೆದ ಏಷ್ಯಾದ ಹಾಗೂ ಭಾರತದದ ಮೊದಲ ವಿಜ್ಞಾನಿ ಎಂಬ ಹಿರಿಮೆ ಅವರದು. ಮುದ್ರಿತ ಚಿನ್ನದ ಪದಕ ಮತ್ತು ನಗದು ಒಳಗೊಂಡ ಪ್ರಶಸ್ತಿಯನ್ನು ಇಟಲಿಯ ಅಧ್ಯಕ್ಷ ಮಾಟ್ಟರೆಲ್ಲಾ ಅಕ್ಟೋಬರ್ 14 ರಂದು ಪ್ರದಾನ ಮಾಡಲಿದ್ದಾರೆ.