ವರದಿ: ಶಫೀ ಉಚ್ಚಿಲ
ಕಾಪು: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ಪಕ್ಕದಲ್ಲಿ ತಾತ್ಕಾಲಿಕ ಮೀನು ಹಾಗೂ ತರಕಾರಿ, ಹಣ್ಣು ಮಾರಾಟ ಸ್ಥಳಕ್ಕೆ ಧಾವಿಸಿದ ಉಚ್ಚಿಲ ಬಡಾ ಗ್ರಾಪಂ ಪಿಡಿಒ ಕುಶಾಲಿನಿ, ಕೊರೊನಾ ಹರಡುವಿಕೆ ಮತ್ತು ಅಪಘಾತ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಿದರು.
“ಇಲ್ಲಿ ತಾತ್ಕಾಲಿಕವಾಗಿ ಮೀನು ವ್ಯಾಪಾರ ನಡೆಸುತ್ತಿದ್ದಾರೆ. ವಾಹನ ನಿಲುಗಡೆಯಿಂದಾಗಿ ಸಾರ್ವಜನಿಕರಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ವ್ಯಾಪಾರಸ್ಥರು ಮತ್ತು ಗ್ರಾಹಕರು ಕೊರೊನಾ ಹರಡುವಿಕೆ ತಡೆ ನಿಟ್ಟಿನಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಬಗ್ಗೆ ಪೊಲೀಸರ ಸಹಕಾರದೊಂದಿಗೆ ಪಂಚಾಯಿತಿ ಜಾಗೃತಿ ಸಮಿತಿ ರಚಿಸಿ, ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ.
ಅಪಘಾತ ತಡೆಗೆ ವ್ಯಾಪಾರ ಸ್ಥಳದಲ್ಲಿ ವಾಹನ ನಿಲುಗಡೆ ಆಗದಂತೆ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಚರ್ಚಿಸುತ್ತೇವೆ” ಎಂದು ಪಿಡಿಒ ಮಾಹಿತಿ ನೀಡಿದರು.

“ಸಮರ್ಪಕ ಮೀನು ಮಾರುಕಟ್ಟೆ ಇಲ್ಲದ ಕಾರಣ ನಾವು ರಸ್ತೆ ಬಳಿ ತಾತ್ಕಾಲಿಕವಾಗಿ ವ್ಯಾಪಾರ ನಡೆಸುತ್ತಿದ್ದೇವೆ. ಪಿಡಿಒ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಸಮಸ್ಯೆ ಅವರ ಗಮನಕ್ಕೆ ತಂದಿದ್ದೇವೆ. ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೊಡಕಾಗದಂತೆ ಜಾಗ್ರತೆ ವಹಿಸಿ ವ್ಯಾಪಾರ ನಡೆಸುತ್ತಿದ್ದೇವೆ” ಎಂದು ಮೀನು ವ್ಯಾಪಾರಿ ಸಂಶುದ್ದೀನ್ ತಿಳಿಸಿದ್ದಾರೆ.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಶಕುಂತಲಾ, ಸದಸ್ಯರಾದ ಅಬ್ದುಲ್ ರಝಾಕ್, ಆಸೀಫ್, ಹರಿಪ್ರಸಾದ್, ಸಿಬ್ಬಂದಿ ಶಶಿಕಾಂತ್, ನಿರ್ಮಲಾ ಹಾಜರಿದ್ದರು.
