ವರದಿ : ಬಿ.ಎಸ್.ಆಚಾರ್ಯ
ಸರಕಾರದ ಕಾನೂನು ಮತ್ತು ಸುವ್ಯವಸ್ಥೆಗೆ ಪೊಲೀಸ್ ಇಲಾಖೆ ಜೊತೆ ದುಡಿಯುವ ಗೃಹರಕ್ಷಕ ದಳದ ಸಿಬ್ಬಂದಿಗಳು ಕೋವಿಡ್ ಸಮಯದಲ್ಲಿ ಕೂಡಾ ಶ್ರಮ ವಹಿಸಿ ದುಡಿಯುತ್ತಿದ್ದಾರೆ. ವಿಪರ್ಯಾಸ ಅಂದ್ರೆ ಅವರ ಒಂದು ದಿನದ ಭತ್ಯೆ ಕೇವಲ 380 ರೂ ಮಾತ್ರ. ಉಡುಪಿ ಜಿಲ್ಲೆಯಲ್ಲಿ ಪುರುಷರು ಮತ್ತು ಮಹಿಳಾ ಸಿಬ್ಬಂದಿಗಳು ಸೇರಿದಂತೆ 500 ಮಂದಿ ಇದ್ದಾರೆ. ಬ್ರಹ್ಮಾವರ ಯುನಿಟ್ ನಲ್ಲಿ 5 ಮಹಿಳೆಯರು ಸೇರಿದಂತೆ ಒಟ್ಟು 32 ಮಂದಿ ಇದ್ದಾರೆ. ಬ್ರಹ್ಮಾವರ ಮತ್ತು ಕೋಟ ಠಾಣಾ ವ್ಯಾಪ್ತಿಯಲ್ಲಿ, ಕಳೆದ ವರ್ಷ ಮತ್ತು ಈ ವರ್ಷ ಕೋವಿಡ್ ಡ್ಯೂಟಿಗಾಗಿ ಪೊಲೀಸ್ ಇಲಾಖೆಯೊಂದಿಗೆ ಹಗಲಿರುಳು ಜೊತೆಯಾಗಿ ದುಡಿಯುತ್ತಿದ್ದಾರೆ.

ರಾತ್ರಿ ಹೊತ್ತು ಗೋವು ಸಾಗಾಟ ಸೇರಿದಂತೆ ಅನೇಕ ಅಪರಾಧಿಗಳನ್ನು ಹಿಡಿಯುವಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳು ಹಿರೀಯ ಅಧಿಕಾರಿಗಳಿಂದ ಅನೇಕರು ಸನ್ಮಾನಗೊಂಡಿದ್ದಾರೆ. ರಾಜ್ಯದ ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯಲ್ಲಿ ದಿನವೊಂದರ 750 ರೂ ಭತ್ಯೆ ಇದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಡಳಿತ 2 ವರ್ಷದಿಂದ ಕೋವಿಡ್ ಡ್ಯೂಟಿಗೆ ದಿನವೊದರ 380 ರೂ.ನಲ್ಲಿ ದುಡಿಸಿಕೊಳ್ಳಲಾಗುತ್ತಿದೆ .
ದಿನಗೂಲಿಗಳು ಕೂಡಾ ಇಂದು 380 ರೂಪಾಯಿಗೆ ಸಿಗದ ಈ ಕಾಲದಲ್ಲಿ ಕೆಲವೊಂದು ಇಲಾಖೆಯಲ್ಲಿ ತಿಂಗಳೊಂದರ ಲಕ್ಷಾಂತರ ರೂ. ಸಂಬಳ ಪಡೆಯುವ ಸರಕಾರದ ಒಂದು ಇಲಾಖೆಯ ಅಂಗವಾದ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಸಿಗುವ ಭತ್ಯೆ ತೀರಾ ಕಡಿಮೆ. ಇಲಾಖೆಗೆ ಸೇರುವಾಗ ಒಂದು ಜೊತೆ ಕಾಕಿ ಉಡುಪು ನೀಡುವುದು ಮಾತ್ರ . ಅದು ಕೂಡಾ ಕೆಲವರ ಅಳತೆಗೆ ಹೊಂದುವುದಿಲ್ಲ. ಶೂ ಮತ್ತು ಬೆಲ್ಟ್, ಕ್ಯಾಪ್ ಇದೆಲ್ಲವೂ ಸಿಬ್ಬಂದಿಗಳೇ ಖರೀದಿಸಬೇಕು.

ಜೀವನ ಭದ್ರತೆ ಇಲ್ಲ
ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಪೋಲೀಸ್ ಠಾಣಾ ವತಿಯಿಂದ ನೀಡುವ ಗಣೇಶೋತ್ಸವ, ದೀಪಾವಳಿ, ರಂಝಾನ್, ಜಾತ್ರೆ ಸೇರಿದಂತೆ ಇನ್ನಿತರ ಡ್ಯೂಟಿಗೆ ದಿನವೊಂದರ 750 ರೂ ನೀಡಲಾಗುತ್ತಿದೆ . ಕಳೆದ 2 ವರ್ಷದಿಂದ ಠಾಣಾ ಡ್ಯೂಟಿ ತಿಂಗಳಲ್ಲಿ 15 ದಿನ ಮಾತ್ರವಾಗಿದ್ದು, ಲೆಕ್ಕಾಚಾರ ಹಾಕಿದಲ್ಲಿ ದಿನವೊಂದರ ಕೇವಲ 380 ರೂಪಾಯಿಯಷ್ಟೆ ಆಗುತ್ತದೆ. ಅನಾರೋಗ್ಯ ಅಥವಾ ಅನೀರೀಕ್ಷಿತ ಘಟನೆಗೆ ತುತ್ತಾದರೆ ಆರೋಗ್ಯ ಸೇರಿದಂತೆ ಯಾವೂದೇ ಜೀವನ ಭದ್ರತೆ ಇವರಿಗಿಲ್ಲ. ನೊಂದಾಯಿತ ಗೃಹರಕ್ಷಕ ದಳದ ಸಿಬ್ಬಂದಿಗಳ ಕೆಲಸದ ದಾಖಲೆಯನ್ನು ಸ್ಥಳಿಯ ಪೋಲೀಸ್ ಠಾಣೆಯಿಂದ ವರದಿ ಹೋದ ಬಳಿಕ ಸಿಬ್ಬಂದಿಗಳ ಬ್ಯಾಂಕ್ ಖಾತೆಗೆ ಭತ್ಯೆ ಜಮಾ ಆಗುತ್ತದೆ. ಬಸ್ ಸಂಚಾರ ಇಲ್ಲದಿರುವ ಭಾಗದಿಂದ ಬರುವ ಚಿಕ್ಕ ಮಕ್ಕಳು ಇರುವ ವಿವಾಹಿತ ಮಹಿಳಾ ಸಿಬ್ಬಂದಿಗಳು ಕೋವಿಡ್ ಡ್ಯೂಟಿಗಾಗಿ ಪ್ರತೀ ದಿನ ರಿಕ್ಷಾದಲ್ಲಿ ಸಂಚಾರಕ್ಕೆ 200 ರೂ ತನಕ ಪ್ರಯಾಣಕ್ಕೆ ಖರ್ಚು ಮಾಡಿ ಡ್ಯೂಟಿ ಮಾಡುತ್ತಾರೆ. ಸರಕಾರ ಮತ್ತು ಜಿಲ್ಲಾಡಳಿತ ಇವರಿಗೆ ಸೂಕ್ತ ವೇತನ ನೀಡಬೇಕಾಗಿದೆ .
