ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಬೇರೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಆಗುತ್ತಿದೆ. ನಮ್ಮಲ್ಲಿ ಕಡಿಮೆ ಆಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆ ಆಗಿಲ್ಲ. 38 ರಿಂದ 19ಕ್ಕೆ ಇಳಿದಿದೆ. ಜೂ. 7 ರ ಒಳಗೆ ಪಾಸಿಟಿವಿಟಿ ರೇಟ್ 10 ರ ಒಳಗೆ ಬರಬೇಕೆಂಬುದು ನಮ್ಮ ಗುರಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಕುಂದಾಪುರದಲ್ಲಿ ದಿಕ್ಸೂಚಿ ನ್ಯೂಸ್ ಜೊತೆ ಮಾತಾಡಿದ ಅವರು, ಉಡುಪಿ ಜಿಲ್ಲೆಯ 50 ಕ್ಕಿಂತ ಹೆಚ್ಚು ಪ್ರಕರಣಗಳಿರುವ 35 ಗ್ರಾಮ ಪಂಚಾಯತ್ ಗಳನ್ನು ಉಸ್ತುವಾರಿ ಸಚಿವರು, ಶಾಸಕರ ಜೊತೆ ಚರ್ಚಿಸಿ ಸೀಲ್ ಡೌನ್ ಮಾಡಲಾಗಿದೆ. ಸೋಂಕು ಏರಿಕೆ ಹಂತದಲ್ಲಿರುವ ಕೆಲವೊಂದು ಪಂಚಾಯತ್ ಗಳು ಅವರಾಗಿಯೇ ಸ್ವಇಚ್ಛೆಯಿಂದ ನಿರ್ಬಂಧ ಹೇರುತ್ತಿವೆ. ಇದಕ್ಕೆ ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಎಂಬ ಭರವಸೆ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಎರಡು ಪಂಚಾಯತ್ ಗಳಿಗೆ ಹೊಂದಿಕೊಂಡಿರುವಂತಹ ಹಳ್ಳಿಗಳನ್ನು ಸೀಲ್ ಡೌನ್ ಮಾಡುವ ಬಗ್ಗೆ ಸಿಇಓಗಳು ಪಂಚಾಯತ್ ಅಧ್ಯಕ್ಷರು, ಪಿಡಿಓಗಳೊಂದಿಗೆ ಮಾತನಾಡಿ ಮುಂದಿನ ಕ್ರಮ ಜರುಗಿಸಲು ಸಿಇಓಗಳಿಗೆ ಸೂಚಿಸಲಾಗಿದೆ ಎಂದರು.
ಡಾಕ್ಟರ್ ನಡೆ, ಹಳ್ಳಿ ಕಡೆ
ಯಾವ ಗ್ರಾ.ಪಂ.ನಲ್ಲಿ ಹೆಚ್ಚು ಸೋಂಕು ಕಂಡು ಬರುತ್ತದೋ ಅಲ್ಲಿಗೆ ಡಾಕ್ಟರ್ ನಡೆ, ಹಳ್ಳಿ ಕಡೆ ಯೋಜನೆ ಮೂಲಕ ವೈದ್ಯರು ತೆರಳುತ್ತಿದ್ದಾರೆ. ಆ ಹಳ್ಳಿಯನ್ನು ಸಂಪೂರ್ಣ ಪರೀಕ್ಷೆ ಮಾಡಬೇಕು ಎಂದು ತಿಳಿಸಲಾಗಿದೆ. ವೈದ್ಯರು ಈ ಕಾರ್ಯವನ್ನು ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ ಎಂದು ಡಿಸಿ ಹೇಳಿದರು. ಈಗಾಗಲೇ 6,000 ಮಂದಿಗೆ ಸ್ಕ್ರೀನಿಂಗ್ ಮಾಡಿದ್ದು, 300 ಮಂದಿಗೆ ಪಾಸಿಟಿವ್ ಬಂದಿದೆ. ಅದರಲ್ಲಿ 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.
ಜನರ ಸಹಕಾರ ಅತೀ ಅಗತ್ಯವಾಗಿದೆ. ಅನಾವಶ್ಯಕವಾಗಿ ಓಡಾಡಿದರೆ, ನಿಯಮಗಳನ್ನು ಪಾಸಿಸದೆ ಹೋದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಆಗದು. ಇಲ್ಲವಾದಲ್ಲಿ ಲಾಕ್ ಡೌನ್ . ನಿಯಮಗಳನ್ನು ಮುಂದುವರೆಯುತ್ತದೆ. ಹಾಗಾಗಿ ನಿಯಮ ಪಾಲಿಸಿ, ಈ ಮೂಲಕ ಪಾಸಿಟಿವಿಟಿ ರೇಟ್ ಕಡಿಮೆ ಮಾಡುವಲ್ಲಿ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರದ ನಿರ್ಧಾರದ ಮೇಲೆ ಮುಂದಿನ ಕ್ರಮ
7 ರ ವರೆಗೆ ಸರ್ಕಾರದ ಆದೇಶದಂತೆ ಲಾಕ್ ಡೌನ್ ಇರಲಿದೆ. ಸರ್ಕಾರದ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೂ.5 ಕ್ಕೆ ಮುಂಗಾರು ಪ್ರವೇಶಿಸಲಿದ್ದು, ಕೊಡೆ ಇತರ ಪರಿಕರಗಳು ಮನೆಯಲ್ಲಿಯೇ ಇರುತ್ತವೆ. ಅದಕ್ಕಾಗಿ ಅಂಗಡಿಗಳನ್ನು ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ.
