ವರದಿ: ಶಫೀಉಚ್ಚಿಲ
ಕಾಪು : ಚಂಡಮಾರುತ ಆರ್ಭಟಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯ ಕಡಲ ತೀರದಲ್ಲಿ ಹಲವು ಕಷ್ಟಕರ ಪ್ರಯತ್ನಗಳ ಬಳಿಕ ಅಡಿಮೇಲಾಗಿದ್ದ ಗುಜರಾತ್ ಮೂಲದ ಟಗ್ ಮೇ 25 ರಂದು ನೇರಗೊಳಿಸಲಾಗಿದ್ದು, ಅಂದಿನಿಂದ ದಿನವೂ ಟಗ್ಗನ್ನು ಮಂಗಳೂರು ಹಳೇ ಬಂದರಿಗೆ ಕೊಂಡೊಯ್ಯಲಾಗುವುದು ಎಂಬ ಪೊಳ್ಳು ಹೇಳಿಕೆಯೇ ಕೇಳಿ ಬರುತ್ತಿವೆ.
ಕಾರ್ಯಾಚರಣೆ ನಡೆಸಿದ ಬಿಲಾಲ್ ನೇತ್ರತ್ವದ ತಂಡ ಪ್ರತೀ ದಿನ ಆಗಮಿಸಿ ಟಗ್ನಲ್ಲಿ ತುಂಬಿದ ಸಮುದ್ರ ನೀರು ಮತ್ತು ಮರಳನ್ನು ತೆರವುಗೊಳಿಸುತ್ತಲೇ ಇವೆ. ಎಮ್ಎಮ್ಡಿ ನಿರಾಪೇಕ್ಷಣಾ ಪತ್ರ ದೊರಕದ ಹಿನ್ನೆಲೆಯಲ್ಲಿ ತೆರವು ಕಾರ್ಯಕ್ಕೆ ತೆರೆ ಬಿದ್ದಿದೆ ಎಂಬ ಮಾತು ಅವರದ್ದಾಗಿದೆ.ಗುರುವಾರದವರೆಗೂ ನಿತ್ಯ ನೀರು ಹೊರಹಾಕುತ್ತಿರುವ ಬಿಲಾಲ್ ತಂಡವು ಗುರುವಾರ ಬೆಳಿಗ್ಗೆ ಜೆಸಿಬಿ ಬಳಸಿ ಪಶ್ಚಿಮ ಕಡೆಗೆ ವಾಲಿ ನಿಂತ ಟಗ್ಗನ್ನು ಪೂರ್ವ ಬದಿಗೆ ವಾಲಿಕೊಳ್ಳುವಂತೆ ಮಾಡಿದ ಪ್ರಯತ್ನ ವಿಫಲವಾಗಿದೆ.


ಟಗ್ ತೆರವು ಅಸಾಧ್ಯವಾದರೆ ಸ್ಕ್ರ್ಯಾಪ್?
ಟಗ್ ತೆರವಿಗೆ ನೂರಾರು ವಿಘ್ನಗಳು ಎದುರಾಗಿರುವ ಹಿನ್ನೆಲೆಯಲ್ಲಿ ಟಗ್ ತೆರವು ಅಸಾಧ್ಯವಾದರೆ ಟಗ್ನ್ನು ಇಲ್ಲೇ ಉಳಿಸಿ ಸ್ಕ್ರ್ಯಾಪ್ ಮಾಡಬೇಕಾಗಬಹುದು ಎಂದು ಟಗ್ ವಕ್ತಾರ ಶೌಕತ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸ್ಥಳೀಯರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಟಗ್ ನೇರಗೊಳಿಸುವವರೆಗೆ ಎಮ್ಆರ್ಪಿಎಲ್ ಉಸ್ತುವಾರಿ ವಹಿಸಿಕೊಂಡಿತ್ತು. ಆ ಬಳಿಕ ಟಗ್ ತೆರವಿನ ಸಂಪೂರ್ಣ ಹೊಣೆ ಟಗ್ ಮಾಲಿಕರದ್ದಾಗಿದೆ.ಟಗ್ಗನ್ನು ಮಂಗಳೂರು ಹಳೇ ಬಂದರಿಗೆ ಕೊಂಡೊಯ್ಯಲು ಅನುಮತಿ ದೊರೆಯದಿದ್ದರೆ ಪಡುಬಿದ್ರಿಯಿಂದ ತೆರವುಗೊಳಿಸಿ ಬೇರೆ ಸುರಕ್ಷತಾ ಸಮುದ್ರ ತೀರದಲ್ಲಿ ಉಳಿಸುವ ಬಗ್ಗೆಯೂ ಕಂಪನಿ ಆಲೋಚಿಸಿದೆ.