ಕೋವಿಡ್ ನಿಂದ ಅನೇಕ ಶಾಲಾ ಶಿಕ್ಷಕರಿಗೆ ಸಂಬಳ ಇಲ್ಲದಂತಹ ದಿನಗಳು ನಿರ್ಮಾಣವಾಗಿವೆ. ಕೆಲವರಿಗೆ ಅರ್ಧ ಸಂಬಳ, ಇನ್ನು ಕೆಲವರಿಗೆ ಸಮಯಕ್ಕೆ ಸರಿಯಾಗಿ ಸಂಬಳವೇ ತಲುಪುತ್ತಿಲ್ಲ. ಇಂತಹ ಕಠಿಣ ಸಮಯದಲ್ಲಿ ಬೆಂಗಳೂರಿನ ಖಾಸಗಿ ಶಿಕ್ಷಕರ ಸಂಘದವರು ಅನೇಕರಿಗೆ ಮನವಿಯನ್ನು ನೀಡಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಈ ವಿಚಾರ ತಿಳಿದ ಸ್ಯಾಂಡಲ್ ವುಡ್ ನಟ ಲಿಖಿತ್ ಶೆಟ್ಟಿ, 33ಕ್ಕೂ ಹೆಚ್ಚು ಶಿಕ್ಷಕರ ಕುಟುಂಬಗಳಿಗೆ ದಿನಸಿ ಸಾಮಾಗ್ರಿಯ ಕಿಟ್ ಅನ್ನು ಕಾಣಿಕೆಯಾಗಿ ನೀಡಿದ್ದಾರೆ. ಶಿಕ್ಷಕರು ಸಮಾಜವನ್ನು ನಿರ್ಮಾಣ ಮಾಡುವವರು. ಇಂತಹ ಸಮಯದಲ್ಲಿ ಅವರ ಜೊತೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯ ಎಂದು ಲಿಖಿತ್ ಶೆಟ್ಟಿ ಸ್ವತ: ತಾವೇ ಶಿಕ್ಷಕರ ಸಂಘದ ಮುಖ್ಯಸ್ಥೆ ಆಯೆಷಾ ಶೇಖ್ ಬೆಂಗಳೂರು ಅವರಿಗೆ ಕರೆ ಮಾಡಿ ಕಿಟ್ ನ್ನು ಹಸ್ತಾಂತರಿಸಿದ್ದಾರೆ.
ಒರಿಯರ್ದೊರಿ ಅಸಲ್(ತುಳು), ನಮ್ ದುನಿಯಾ ನಮ್ ಸ್ಟೈಲ್, ಪೆಟ್ರೋಲ್, ಸಂಕಷ್ಟ ಕರ ಗಣಪತಿ , ಫ್ಯಾಮಿಲಿ ಪ್ಯಾಕ್ ಚಿತ್ರಗಳಲ್ಲಿ ನಟಿಸಿರುವ ಲಿಖಿತ್ ಶೆಟ್ಟಿ ಇದೀಗ ಸಂಕಷ್ಟದಲ್ಲಿದ್ದ ಶಿಕ್ಷಕರಿಗೆ ನೆರವು ನೀಡಿ ಸಾಮಾಜಿಕ ಕಾರ್ಯ ಮೆರೆದಿದ್ದಾರೆ.
