ಉಡುಪಿ : ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ ಹಾಗೂ ವಿಶ್ವ ಬಂಟ್ಸ್ ಯೂತ್ ವಿಂಗ್ ಉಡುಪಿ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ದೈವ ಚಾಕ್ರಿ ವರ್ಗದವರಿಗೆ ಹಾಗೂ ಬಡ ಕುಟುಂಬಗಳಿಗೆ 100 ಆಹಾರ ಪ್ಯಾಕೇಜ್ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ, ಕುಕ್ಕೆಹಳ್ಳಿ ಕೊರಗಜ್ಜ ದೈವಸ್ಥಾನದ ವಟಾರದಲ್ಲಿ ದ್ವೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಗುಲಾಬಿ ಮೆಂಡನ್ ಅವರು ಉದ್ಘಾಟಿಸಿದರು.
ಈ ಸಂದರ್ಭ ವಿಶ್ವ ಬಂಟ್ಸ್ ಯೂತ್ ವಿಂಗ್ ಅಧ್ಯಕ್ಷ ವಿನೋದ್ ಶೆಟ್ಟಿ ಮಾತನಾಡಿ,
ದೈವ ಚಾಕ್ರಿ ವರ್ಗದವರ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಇವರ ಹೆಗಲ ಮೇಲೆ ಇರುವುದರಿಂದ ಈ ವರ್ಷವಿಡೀ ಲಾಕ್ಡೌನ್ ಸಮಸ್ಯೆಯಿಂದ ಎಲ್ಲಿಯೂ ದೈವಾರಾಧನೆಯ ಚಾಕರಿಯನ್ನು ಮಾಡಲಾಗಲಿಲ್ಲ. ಜೀವನ ನಿರ್ವಹಣೆಗೆ ಈ ಕುಲಕಸುಬನ್ನೇ ನಂಬಿರುವ ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಈಡಾಗಿವೆ. ಜೀವನ ಪೂರ್ತಿ ಯಾರೊಬ್ಬರಲ್ಲಿಯೂ ಸಹಾಯ ಬೇಡದೇ, ಜೀವನ ಸಾಗಿಸುತ್ತಾ ಬಂದಿರುವ ಇವರು ನಿಜವಾಗಿಯೂ ಸರಕಾರದ ಎಲ್ಲಾ ಸಹಾಯದದ ಅನುದಾನಕ್ಕೆ ಅರ್ಹರಾಗಿರುತ್ತಾರೆ. ಸರ್ಕಾರದಿಂದ ಯಾವುದೇ ಪ್ಯಾಕೇಜನ್ನು ಬಿಡುಗಡೆ ಮಾಡಲಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಒಕ್ಕೂಟದ ಪರವಾಗಿ ಮುಖ್ಯಮಂತ್ರಿಯ ಗಮನಕ್ಕೆ ತರಲಾಗುವುದು. ಕೊರಗಜ್ಜ ದೈವಸ್ಥಾನದ ಧರ್ಮದರ್ಶಿಗಳು ನಮ್ಮೊಂದಿಗೆ ಕೈಜೋಡಿಸಿರುವುದು ತುಂಬಾ ಸಂತೋಷ. ಕುಕ್ಕೆಹಳ್ಳಿ ಕೊರಗಜ್ಜ ದೈವಸ್ಥಾನ ಉತ್ತಮ ಸಮಾಜಮುಖಿ ಕೆಲಸ ಕಾರ್ಯಗಳು ಎಲ್ಲರಿಗೂ ಒಂದು ಮಾದರಿಯಾಗಬೇಕು. ಊರಿನ ಗ್ರಾಮದ ದೇವಸ್ಥಾನ, ದೈವಸ್ಥಾನಗಳು ಇಂಥ ಸಂಕಷ್ಟದ ಸಮಯದಲ್ಲಿ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿದರೆ ಅದಕ್ಕಿಂತ ದೊಡ್ಡ ಪುಣ್ಯದ ಕೆಲಸ ಯಾವುದು ಇಲ್ಲ ಎಂದರು.

ಧರ್ಮದರ್ಶಿ ಕೃಷ್ಣ ಕುಲಾಲ್ ಮಾತನಾಡಿ, ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ನಮ್ಮ ದೈವಸ್ಥಾನದಿಂದ ಇನ್ನು ಮುಂದೆಯೂ ಕೈಲಾದಷ್ಟು ಸಹಾಯಕ್ಕೆ ಬದ್ಧರಾಗಿದ್ದೇವೆ. ಕರಾವಳಿಯಲ್ಲಿ ಇಂತಹ ಅದೆಷ್ಟೋ ದೈವಾರಾಧನೆಯ ಕಲಾವಿದರು ಲಾಕ್ಡೌನ್ನಿಂದ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಅವರ ಕುಟುಂಬಗಳು ತುಂಬಾ ಸಂಕಷ್ಟದಲ್ಲಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸರ್ಕಾರದ ಕಟ್ಟುನಿಟ್ಟಾದ ಆದೇಶ ಪಾಲಿಸಿ, 200 ಜನರನ್ನೊಳಗೊಂಡಂತೆ ದೈವಾರಾಧನೆ ನಡೆಸುವ ಬಗ್ಗೆ ಸರ್ಕಾರ ಅನುಮತಿ ಕೊಡಬೇಕು ಎಂದು ಮನವಿ ಮಾಡಿದರು.
ಬಡ ಹಾಗೂ ದೈವ ಚಾಕ್ರಿ ಮಾಡುವವರ ಮನೆ ಮನೆಗೆ ತೆರಳಿ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಿತ ಶೆಟ್ಟಿ, ಅಶೋಕ್ ಶೆಟ್ಟಿ, ರಾಜರಾಮ್ ಶೆಟ್ಟಿ, ಸುನೀತ ಕುಲಾಲ್, ನವೀನ್ ಪಾತ್ರಿ, ವೈಶಾಲಿ ಕುಲಾಲ್, ಸಂಕೇತ್ ಕುಂದರ್, ಸುಧಾಕರ್ ಕುಲಾಲ್, ಸತೀಶ್ ಮೆಂಡನ್, ಯಜ್ಞೇಶ್ ಮೆಂಡನ್, ಸುಧಾಕರ್ ಮೆಂಡನ್, ಗಣಪತಿ ಸೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.

