ಉಡುಪಿ : ಹಿರಿಯರ ಮತ್ತು ಋಷಿಮುನಿಗಳ ಸಾವಿರಾರು ವರ್ಷದ ಅನ್ವೇಷಣೆಯ ಪರಿಣಾಮವಾಗಿ ಇಂದು ನಮಗೆ ಯೋಗದ ಫಲ ದೊರಕಿದೆ. ಈ ಪರಿಣಾಮವನ್ನು ದೈಹಿಕವಾಗಿ ಮಾನಸಿಕವಾಗಿ ಒತ್ತಡಗಳು ಎದುರಾದಾಗ ಚಂಚಲತೆಗೆ ಒಳಗಾಗದೆ ದೇಹದೊಂದಿಗೆ ಮನಸ್ಸನ್ನು ಕೇಂದ್ರೀಕರಿಸಲು ಯೋಗಾಭ್ಯಾಸವನ್ನು ರೂಢಿಸಿಕೊಂಡಲ್ಲಿ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಇಂದು ನಗರದ ಆಯುಷ್ ಇಲಾಖೆಯಲ್ಲಿ ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಉಡುಪಿ, ಇವರ ಸಹಯೋಗದೊಂದಿಗೆ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆನ್ಲೈನ್ ಮೂಲಕ ಯೋಗ ಶಿಕ್ಷಣವನ್ನು ಉದ್ಘಾಟಿಸಿ ಮಾತನಾಡಿದರು.
2015ರ ಜೂನ್ 21ರಿಂದ ಯೋಗದಿನವನ್ನು ವಿಶೇಷ ರೀತಿಯ ಸಾಮಾಜಿಕ ಸಂದೇಶದೊಂದಿಗೆ ಆಚರಿಸುತ್ತಾ ಬಂದಿದ್ದು, ಕೋವಿಡ್-19ನ ಸಾಂಕ್ರಾಮಿಕ ಸಂದಿಗ್ಧತೆಯಲ್ಲಿ ಈ ವರ್ಷವು “ಮನೆಯಲ್ಲಿರಿ…ಯೋಗದೊಂದಿಗೆ ಇರಿ ” ಎಂಬ ಧ್ಯೇಯ ವಾಕ್ಯದೊಂದಿಗೆ, ಆಚರಿಸುತ್ತಾ ಹಿರಿಯರು ನಮಗಾಗಿ ಕೊಟ್ಟ ಇಂತಹ ಕೊಡುಗೆಯನ್ನು ರೂಢಿಸಿಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಯೋಗದ ಬಗ್ಗೆ ಜನಸಾಮಾನ್ಯರಿಗೂ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆಯುಷ್ ಇಲಾಖೆ ಹಲಾವಾರು ತರಬೇತಿಗಳನ್ನು ಹಮ್ಮಿಕೊಳ್ಳಬೇಕು, ಕೋವಿಡ್ ಹೋಗಲಾಡಿಸಲು ಯೋಗದೊಂದಿಗೆ ಆಯುರ್ವೇದದ ಮಹತ್ವವನ್ನು ಜನರಿಗೆ ತಲುಪುವಂತಾಗಬೇಕು ಎಂದರು.

ಜಿಲ್ಲೆಯಲ್ಲಿ ಯೋಗ ಕೇಂದ್ರವನ್ನು ನಡೆಸಲು ಆಯುಷ್ ಇಲಾಖೆಯಲ್ಲಿ ಇರುವ ಕೊರತೆಯನ್ನು ವೈದ್ಯರು ತಿಳಿಸಿದ್ದಲ್ಲಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಸರ್ಕಾರದ ಮೂಲಕ ಇನ್ನು ಹೆಚ್ಚಿನ ರೀತಿಯಲ್ಲಿ ಜಿಲ್ಲೆಗೆ ಒದಗಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷಾಧಿಕಾರಿ ಪ್ರಕಾಶ್ ನಾಯ್ಕ್, ಕೊರೋನಾ ಜಾಗೃತಿಯೊಂದಿಗೆ ಜನರಲ್ಲಿಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಈ ಯೋಗ ತರಬೇತಿಯನ್ನು ನೀಡುತ್ತಿದ್ದೇವೆ. ಮನೆಯಲ್ಲಿಯೇ ಐಸೋಲೇಷನ್ ಆದವರಿಗೂ ಕೂಡಾ ಆನ್ಲೈನ್ ಮೂಲಕ ಯೋಗಾಭ್ಯಾಸ ಮಾಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಪಿಜಿಎಸ್ಎಸ್ನ ಜಿಲ್ಲಾ ಶಿಕ್ಷಣ ಪ್ರಮುಖರಾದ ಲಲಿತಾ ಕೆದ್ಲಾಯಿ, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ವೀಣಾಕಾರಂತ್ ನಿರೂಪಿಸಿದರು.

