ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಮಲ್ಪೆಯಿಂದ ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169A ಇದರ ಕಾಮಗಾರಿ ಈಗಾಗಲೇ ಭರದಿಂದ ನಡೆಯುತ್ತಿದ್ದು, ಹೆದ್ದಾರಿ ಹೆಬ್ರಿ ಮುಖಾಂತರ ಹಾದು ಹೋಗಲಿದ್ದು ಇದರಿಂದ ಪೇಟೆ ಇನ್ನಷ್ಟು ಅಭಿವೃದ್ಧಿ ಆಗಲಿದೆ. ಹೆಬ್ರಿ ತಾಲ್ಲೂಕಾದ ಮೇಲೆ ಈಗ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಈಗಿರುವ ಪೇಟೆಯ ರಸ್ತೆ ಅತ್ಯಂತ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ತಡೆ ಉಂಟಾಗುತ್ತಿರುವುದು ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿದೆ. ಹೈವೇ ಆದ ಮೇಲೆ ರಸ್ತೆ ಅಗಲೀಕರಣಗೊಂಡು ಹೆಬ್ರಿ ಪೇಟೆ ಸುಂದರವಾಗಿ ಕಾಣಲಿದೆ. ಆದುದರಿಂದ ಇದು ಯಾವುದೇ ಕಾರಣಕ್ಕೂ ಬೈಪಾಸ್ ಮೂಲಕ ಹಾದು ಹೋಗುವುದು ಬೇಡ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಚಿಸಿರುವ ನೀಲಾ ನಕ್ಷೆಯಲ್ಲಿ ಇರುವಂತೆ ಹೆಬ್ರಿ ಪೇಟೆಯಲ್ಲಿ ಹೆದ್ದಾರಿ ಹಾದು ಹೋಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ(ಪ್ರವೀಣ್ ಶೆಟ್ಟಿ) ಆಗ್ರಹಿಸಿದೆ.
ಇತ್ತೀಚೆಗೆ ಹೆಬ್ರಿಯ ತಹಶೀಲ್ದಾರ್ ಅವರಿಗೆ ಹೆದ್ದಾರಿಯ ಅಕ್ಕ – ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಯ ಮಾಲೀಕರು, ರಾಷ್ಟ್ರೀಯ ಹೆದ್ದಾರಿ ಪೇಟೆಯಲ್ಲಿ ಹಾದು ಹೋಗುವುದು ಬೇಡ. ಇದು ಬೈಪಾಸ್ ನಲ್ಲಿ ಹಾದು ಹೋಗಲಿ ಎಂದು ಮನವಿ ನೀಡಿದ್ದಾರೆ. ಇದು ಸರಿಯಲ್ಲ. ಇವರ ಅನುಕೂಲಕ್ಕೆ ಹೆದ್ದಾರಿಯ ದಿಕ್ಕನ್ನು ಬದಲಿಸುವುದು ಬೇಡ. ಈ ಬಗ್ಗೆ ನಮ್ಮ ಹಾಗೂ ಹೆಬ್ರಿ ಜನತೆಯ ವಿರೋಧ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ನಾವು ಸಿದ್ಧ ಎಂದು ಸ್ಥಳೀಯರ ಪರವಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷ ಶ್ರೀಕಾಂತ ಪೂಜಾರಿ ಕುಚ್ಚೂರು ಉಪಸ್ಥಿತರಿದ್ದರು.