ಬೆಂಗಳೂರು : ಎರಡು ದಿನ ಪರೀಕ್ಷೆ ನಡೆಯಲಿದ್ದು ಜುಲೈ 19 ಸೋಮವಾರ ರಂದು ಗಣಿತ, ಸಮಾಜವಿಜ್ಞಾನ, ವಿಜ್ಞಾನ ಪರೀಕ್ಷೆ ನಡೆಯಲಿದೆ. ಜುಲೈ 22 ಗುರುವಾರ ದಂದು ಭಾಷಾ ವಿಷಯ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಈ ಬಾರಿ 73,066 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ಆತ್ಮವಿಶ್ವಾಸ, ಆತ್ಮಸ್ಥೈರ್ಯ ಕ್ಕಾಗಿ ಪರೀಕ್ಷೆ ನಡೆಸಲು ಚರ್ಚೆ ಮಾಡಿದ್ದೇವೆ. ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ, ಸಲಹೆ ಪಡೆದು ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ. ಎರಡು ದಿನ ಪರೀಕ್ಷೆ ನಡೆಯಲಿದ್ದು, ಗಣಿತ, ಸಮಾಜವಿಜ್ಞಾನ, ವಿಜ್ಞಾನ ಪರೀಕ್ಷೆ ಒಂದು ದಿನ. ಇನ್ನೊಂದು ದಿನ ಭಾಷಾ ವಿಷಯಗಳ(ಕನ್ನಡ, ಇಂಗ್ಲೀಷ್,ಹಿಂದಿ) ಪರೀಕ್ಷೆ ನಡೆಯಲಿದೆ. ಬಹು ಆಯ್ಕೆ ಪ್ರಶ್ನೆಗಳಿರುತ್ತದೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರದ ಬಳಿ ವಾಹನ ದಟ್ಟನೆ ಆಗಬಾರದು. ಜನಜಂಗುಳಿ ಆಗಬಾರದು. ಪರೀಕ್ಷಾ ಕೇಂದ್ರದಿಂದ 200 ಮೀಟರ್ 144 ಸೆಕ್ಷನ್ ಜಾರಿ ಮಾಡಲಾಗುವುದು ಎಂದರು.
ಕೋವಿಡ್ ಚಿಹ್ನೆಯಿರುವ ಮಕ್ಕಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ, ಕೊವೀಡ್ ಪಾಸಿಟಿವ್ ಇರುವ ಮಕ್ಕಳಿಗೆ ಸ್ಥಳೀಯ ಕೋವಿಡ್ ಸೆಂಟರ್ ನಲ್ಲಿ ಪರೀಕ್ಷೆ ಪಡೆಯಲು ಅವಕಾಶ ನೀಡಲಾಗುತ್ತದೆ. ವಲಸೆ ಮಕ್ಕಳಿಗೆ ತಮ್ಮ ಮನೆ ಬಳಿಯೇ ಪರೀಕ್ಷೆ ಬರೆಯಲು ಅವಕಾಶ. ನಾಳೆಯಿಂದ ವೆಬ್ಸೈಟ್ ನಲ್ಲಿ ಹಾಲ್ ಟಿಕೆಟ್ ಲಭ್ಯವಿರಲಿದೆ ಎಂದರು.
ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪನೆ
ಮಕ್ಕಳಿಗೆ ಸರ್ಜಿಕಲ್ ಮಾಸ್ಕ್ ವಿತರಿಸಲಾಗುವುದು. N95 ಮಾಸ್ಕ್ ಮಕ್ಕಳಿಗೆ ಅಗತ್ಯವಿಲ್ಲ. ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪಿಸಿ, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡೆ ಗಮನ ಹರಿಸಲಾಗುವುದು. ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ ಎಂದರು. ಸಹಾಯ ಮಾಡಲು ಸೌಟ್ಸ್ ಮತ್ತು ಗೌಡ್ಸ್ ನವರೂ ನೆರವು ನೀಡಲು ಬಂದಿದ್ದಾರೆ. ಆಶಾ ಕಾರ್ಯಕರ್ತೆ ಯರು ಮತ್ತು ಪ್ಯಾರಾ ಮೆಡಿಕಲ್ ಸ್ಟಾಫ್ ಕೂಡ ಇರುತ್ತಾರೆ.

ಪರೀಕ್ಷೆಯ ಪಾವಿತ್ರ್ಯತೆಯೂ ಮುಖ್ಯ. ಪ್ರಶ್ನೆ ಪತ್ರಿಕೆ ಲೀಕ್ ಆಗದಂತೆ ಕ್ರಮ. ಲೀಕ್ ವದಂತಿ ಹಬ್ಬಿಸುವವರಿಗೆ ಎಚ್ಚರಿಕೆ ನೀಡಿದರು.
ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯಲಾಗದಿದ್ದರೆ, ಫಲಿತಾಂಶದ ನಂತರವೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದರು.
ದ್ವಿತೀಯ ಪಿಯುಸಿ ಫಲಿತಾಂಶ
ಜುಲೈ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ. ಯಾರಿಗೂ ಅನ್ಯಾಯವಾಗದಂತೆ ಫಲಿತಾಂಶ ನೀಡಲಾಗುವುದು. ಫಲಿತಾಂಶ ಪ್ರಕಟಣೆಗೆ 12 ತಜ್ಞರ ಸಮಿತಿ ರಚಿಸಲಾಗುವುದು ಎಂದಿದ್ದಾರೆ. ಹೆಚ್ಚು ಅಂಕ ಬರಬೇಕೆಂದು ಬಯಸುವ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದಿದ್ದಾರೆ

