ವರದಿ : ಶ್ರೀದತ್ತ ಹೆಬ್ರಿ
ಪಡುಕುಡೂರು : ಮುನಿಯಾಲು ವರಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕುಡೂರು ಒಳಗುಡ್ಡೆಯ ಹಳೆ ಮಜಲು ಪ್ರೇಮಾ ಪೂಜಾರಿ ಎಂಬವರು ಬಂಡೆಯ ಮೇಲೆ ಅಡುಗೆ ಮಾಡಿ ವಾಸಿಸುವ ಸುದ್ದಿ ತಿಳಿದ ಹೆಬ್ರಿ ತಹಶೀಲ್ದಾರ್ ಪುರಂದರ್ ಕೆ. ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಅಸಾಯಕ ಸ್ಥಿತಿಯಲ್ಲಿರುವ ಪ್ರೇಮ ಪೂಜಾರಿ ಕಷ್ಟಕ್ಕೆ ಸ್ಪಂದಿಸಿ ಧೈರ್ಯ ತುಂಬಿದರು. ಅಕ್ಕಿ, ಆಹಾರ ಧಾನ್ಯಗಳ ಕಿಟ್ ಮತ್ತು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ೭೫ ಶೇಕಡ ಅಂಗವಿಕಲರಾಗಿರುವ ಪ್ರೇಮಾ ಪೂಜಾರಿ ಅವರಿಗೆ ವಿಕಲಚೇತನ ವೇತನ ಸಹಿತ ಸರ್ಕಾರದ ವಿವಿಧ ಸವಲತ್ತು ನೀಡಲು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಪುರಂದರ್ ಕೆ. ತಿಳಿಸಿದರು. ಗಂಡ ಮನೆಗೆ ಬಾರದಿರುವುದು, ಮನೆಮಂದಿ ನೋಡಿಕೊಳ್ಳದಿರುವ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಂದಾಯ ನಿರೀಕ್ಷಕರಿಗೆ ತಹಶೀಲ್ದಾರ್ ಸೂಚನೆ ನೀಡಿದರು.


ದಲಿತ ಸಂಘರ್ಷ ಸಮಿತಿಯಿಂದ ಮನೆ ನಿರ್ಮಾಣಕ್ಕೆ ಸಿದ್ಧತೆ :
ಒಂಟಿ ಮಹಿಳೆಯ ಸಂಕಷ್ಟವನ್ನು ಕಂಡು ಪಡುಕುಡೂರು ದಲಿತ ಸಂಘರ್ಷ ಸಮಿತಿಯು ದಲಿತ ಮುಖಂಡ ಶೇಖರ್ ಹಾವಂಜೆ ನೇತ್ರತ್ವದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು ಈಗಾಗಲೇ ಮನೆಗೆ ತಳಪಾಯ ಹಾಕಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ವರಂಗ ವತಿಯಿಂದ ಜಿಲ್ಲಾ ಘಟಕದ ಸಹಕಾರದಲ್ಲಿ ಗೋಡೆಗೆ ಇಟ್ಟಿಗೆಯನ್ನು ನೀಡಿದ್ದಾರೆ. ಇನ್ನಷ್ಟು ನೆರವಿನ ಭರವಸೆ ನೀಡಿದ್ದಾರೆ. ಶಿವಪುರದ ಮುಖಂಡ ಸುರೇಶ ಶೆಟ್ಟಿಯವರು ಮನೆಗೆ ಬೇಕಾಗುವಷ್ಟು ಸಿಮೇಂಟ್ ಶೀಟ್ ನೀಡುವುದಾಗಿ ಸೋಮವಾರ ಸ್ಥಳದಲ್ಲಿ ತಿಳಿಸಿದರು. ಮಹಿಳೆಗೆ ಮನೆ ಕಟ್ಟಿಕೊಡುವ ದಲಿತ ಸಂಘರ್ಷ ಸಮಿತಿಯ ಸೇವೆಗೆ ತಹಶೀಲ್ದಾರ್ ಪುರಂದರ್ ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಪುರದ ಮುಖಂಡ ಸುರೇಶ್ ಶೆಟ್ಟಿ, ಕಂದಾಯ ನಿರೀಕ್ಷಕ ಹಿತೇಶ್ ಯುಬಿ, ದಲಿತ ಸಂಘರ್ಷ ಸಮಿತಿಯ ಪಡುಕುಡೂರಿನ ಪ್ರಮುಖರು ಉಪಸ್ಥಿತರಿದ್ದರು.
