ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ತುಮಕೂರಿನಲ್ಲಿ ನಡೆದಿದ್ದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಾವುಂದದ ಛಾಯಾಗ್ರಾಹಕರೊಬ್ಬರ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ನಾವುಂದದ ಮಾನಸ ಸ್ಟೂಡಿಯೋ ಮಾಲೀಕ ಹೇರೂರು ಅಶೋಕ್ ಶೆಟ್ಟಿ (58) ಮೃತರು. ಅಶೋಕ್ ಶೆಟ್ಟಿ ಹಾಗೂ ಅವರ ಪುತ್ರ, ಪುತ್ರ ಪನ್ನಗ ಶೆಟ್ಟಿ ಹಾಗೂ ಇನ್ನೋರ್ವ ಛಾಯಾಗ್ರಾಹಕ ಕುಮಾರ್ ಜೊತೆ ಬೆಂಗಳೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಫೆÇೀಟೋಗ್ರಫಿ ಮುಗಿಸಿ ಭಾನುವಾರ ತಡರಾತ್ರಿ ಮನೆಗೆ ಬರುತ್ತಿದ್ದರು. ಕಾರು ತಮಕೂರು ಸಮೀಪದ ತಾವರೆಕೆರೆ ಸಮೀಪಿಸುತ್ತಿದ್ದಂತೆಯೇ ಎದುರುಗಡೆಯಿಂದ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಪರಿಣಾಮ ಅಶೋಕ್ ಶೆಟ್ಟಿ ಹಾಗೂ ಕಾರು ಚಲಾಯಿಸುತ್ತಿದ್ದ ಪುತ್ರ ಪನ್ನಗ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಹಿಂಬದಿಯಲ್ಲಿ ಕುಳಿತ್ತಿದ್ದ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದರು. ಗಂಭೀರ ಗಾಯಗೊಂಡ ಅಶೋಕ್ ಶೆಟ್ಟಿಯವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಭಾಗಕ್ಕೆ ಬಲವಾದ ಪೆಟ್ಟು ತಗುಲಿದ್ದರಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಪುತ್ರ ಪನ್ನಗ ಶೆಟ್ಟಿ ಅವರನ್ನು ಸೋಮವಾರವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಅಶೋಕ್ ಶೆಟ್ಟಿಯವರ ಮೃತದೇಹ ತುಮಕೂರಿನ ಆಸ್ಪತ್ರೆಯಲ್ಲಿದ್ದು ಮೃತದೇಹವನ್ನು ಮನೆಗೆ ತರುವ ಪ್ರಕ್ರಿಯೆಗಳು ನಡೆಯುತ್ತಿದೆ. ಕುಂದಾಪುರ ಛಾಯಾಗ್ರಾಹಕ ಸಂಘದ ಅಧ್ಯಕ್ಷ ರಾಜು ದೇವಾಡಿಗ ಮಠದಬೆಟ್ಟು ಸೇರಿದಂತೆ ಸಂಘದ ಪದಾಧಿಕಾರಿಗಳು ತುಮಕೂರಿನಲ್ಲಿದ್ದು ಮೃತದೇಹ ಮನೆಗೆ ತರುವ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಅಶೋಕ್ ಕುಮಾರ್ ಶೆಟ್ಟಿಯವರು ಕುಂದಾಪುರ ತಾಲೂಕು ಛಾಯಾಗ್ರಾಹಕ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಜಿಲ್ಲಾ ಛಾಯಾಗ್ರಾಹಕ ಸಂಘದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
