ಬ್ರಹ್ಮಾವರ : ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ದಿವಂಗತರಾದ ಕ್ಲಬ್ಬಿನ ಉಪಾಧ್ಯಕ್ಷ ಸಾಲ್ವಡೊರ್ ನೊರೊನ್ಹಾ ಹಾಗೂ ಕ್ಲಬ್ ನ ಸದಸ್ಯರಾಗಿದ್ದ ಜಯರಾಜ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ವೇಳೆ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಎಂ.ಚಂದ್ರಶೇಖರ್ ಹೆಗ್ಡೆ, ಕಾರ್ಯದರ್ಶಿ ಗ್ರೆಗೊರಿ ಡಿಸಿಲ್ವ, ಪ್ರೊಫೆಸರ್ ಕೆ. ನಾರಾಯಣನ್, ಜಿ ಬಾಲಕೃಷ್ಣ ಶೆಟ್ಟಿ , ಬಿರ್ತಿ ರಾಜೇಶ್ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿಯವರು ಅಗಲಿದ ಮಹನೀಯರನ್ನು ಹಾಗೂ ಅವರ ಸೇವೆಯನ್ನು ನೆನಪಿಸಿಕೊಂಡು ಅವರಿಗೆ ಶ್ರದ್ಧಾಂಜಲಿ ಕೋರಿದರು.
ಈ ಸಂದರ್ಭ ಸಾಲ್ವಡೊರ್ ನೊರೊನ್ಹಾರವರು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಗೆ ನೀಡಿದ ಸೇವೆಯನ್ನು ಗುರುತಿಸಿ, ಕೆಲವೇ ದಿನಗಳಲ್ಲಿ ಕ್ಲಬ್ ನ ಆವರಣದಲ್ಲಿ ಉದ್ಘಾಟನೆಯಾಗಲಿರುವ ಹೊಸ ಈಜು ಕೊಳಕ್ಕೆ `ಸಾಲ್ವಡೊರ್ ನೊರೊನ್ಹಾ’ ಅವರ ಸ್ಮಾರಕವಾಗಿ ನಾಮಕರಿಸುವ ಪ್ರಸ್ತಾಪ ಮಂಡಿಸಲಾಯಿತು. ಸರ್ವ ಸದಸ್ಯರು ಈ ಸಲಹೆಯನ್ನು ಸ್ವಾಗತಿಸಿ, ಸರ್ವಾನುಮತಿಯಿಂದ ಒಪ್ಪಿಗೆ ನೀಡಿದರು.

1976 ರಿಂದ 2014 ವರೆಗೆ ಸುಮಾರು ನಾಲ್ಕು ದಶಕಗಳ ಕಾಲ ಎಸ್.ಎಂ.ಎಸ್ ಕಾಲೇಜಿನಲ್ಲಿ ಸೇವೆ ನೀಡಿದ ನೊರೊನ್ಹಾರವರು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಕಳೆದ ಮೇ 19ರಂದು ಅವರು ನಿಧನ ಹೊಂದಿದರು.

