ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕುಂದಾಪುರ ತಾಲೂಕಿನ ಬಸ್ರೂರು ಸಮೀಪದ ಮೂಡ್ಕೇರಿ ಕೋಟಿ ಚೆನ್ನಯ್ಯರ ಪಂಜುರ್ಲಿ ಗರಡಿಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳವಾರ ಸಂಜೆ ಭೇಟಿ ನೀಡಿದರು.
ಬಿಲ್ಲವ ಸಮಾಜದಿಂದ ಮನವಿ:


ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುಸಂಖ್ಯೆಯಲ್ಲಿ ಬಿಲ್ಲವ ಸಮಾಜದವರಿದ್ದು ಅವರಲ್ಲಿ ಬಹುತೇಕರು ಮೂರ್ತೇದಾರಿಕೆ ನಡೆಸುತ್ತಿದ್ದಾರೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರ ಪ್ರಯತ್ನದಿಂದ ಅಬಕಾರಿ ಇಲಾಖೆಗೆ ಒಳಪಟ್ಟಿದ್ದ ಶೇಂದಿ ಇಳಿಸುವಿಕೆ ಮತ್ತು ಮಾರುವಿಕೆಯನ್ನು ಸ್ವತಂತ್ರಗೊಳಿಸಿ ಮೂರ್ತೇದಾರರ ಹಿತ ಕಾಪಾಡಿದ್ದರು. ಶೇಂದಿ ಇಳಿಸುವಾಗ ಮರದಿಂದ ಬಿದ್ದು ಮೃತಪಟ್ಟರೆ 2 ಲಕ್ಷ ಪರಿಹಾರ ನೀಡುವ ಭರವಸೆ ಈವರೆಗೂ ಈಡೇರಿಲ್ಲ. ಅವಿಭಜಿತ ಜಿಲ್ಲೆಗಳಲ್ಲಿ 280ಕ್ಕೂ ಅಧಿಕ ಕೋಟಿ ಚೆನ್ನಯ್ಯರ ಗರಡಿಯಿದ್ದು ಇಲ್ಲಿ ಸೇವೆ ಸಲ್ಲಿಸುತ್ತಿರುವ ಬಿಲ್ಲವ ಅರ್ಚಕರು ಹಾಗೂ ಅವರ ಕುಟುಂಬಿಕರಿಗೆ ಸರಕಾರದ ಯಾವುದೇ ಸಹಕಾರ ಸಿಗದೇ ಶೋಚನೀಯ ಜೀವನ ನಡೆಸುತ್ತಿದ್ದಾರೆ. ಕೋವಿಡ್ ಲಾಕ್ಡೌನ್ ಇಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಮೂರ್ತೇದಾರರು ಹಾಗೂ ಗರಡಿ ಅರ್ಚಕರಿಗೆ ಪರಿಹಾರ ಒದಗಿಸುವಲ್ಲಿ ಸರಕಾರವನ್ನು ಆಗ್ರಹಿಸಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಈ ಸಂದರ್ಭದಲ್ಲಿ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ದ್ರುವ ನಾರಾಯಣ, ಮಾಜಿ ಸಚೊವ ವಿನಯ್ ಕುಮಾರ್ ಸೊರಕೆ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಎಐಸಿಸಿ ಸದಸ್ಯ ಪಿ.ವಿ ಮೋಹನ್, ಬಸ್ರೂರು ಮೂಡ್ಕೇರಿ ಗರಡಿ ಆಡಳಿತ ವ್ಯವಸ್ಥಾಪಕ ಬಿ. ಗೋಪಾಲ ಪೂಜಾರಿ, ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಎಸ್. ರಾಜು ಪೂಜಾರಿ,ಮದನ್ ಕುಮಾರ್, ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘಧ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಟ್ರಸ್ಟ್ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಶ್ರೀಕಾಂತ್ ಕಡ್ಗಿಮನೆ, ಸಂಘದ ಕಾರ್ಯದರ್ಶಿ ಗಣೇಶ ವಿಠಲವಾಡಿ, ಸ್ಥಳೀಯ ಸಂಘದ ಅಧ್ಯಕ್ಷ ಜಯಸೂರ್ಯ ಪೂಜಾರಿ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಾಣಿಗೋಪಾಲ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ,
ದೇವಾನಂದ ಶೆಟ್ಟಿ, ವಿಕಾಸ್ ಹೆಗ್ಡೆ, ಮಾಜಿ ತಾ.ಪಂ ಸದಸ್ಯೆ ಜಾನಕಿ ಬಿಲ್ಲವ, ಸುರೇಶ್ ಚಾತ್ರಬೆಟ್ಟು ಇದ್ದರು.

ಮೀನುಗಾರರಿಗೆ ಸ್ಪಂದನೆ :
ಕಳೆದೆರಡು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರ ಸಹೋದರ ಸಂಸದ ಡಿ ಕೆ ಸುರೇಶ್ ಅವರು ಕುಂದಾಪುರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಬಂದಾಗ ಬೀಚ್ ನಲ್ಲಿ ಮೀನುಗಾರರನ್ನು ಮಾತನಾಡಿಸಿ ಅವರ ಕಷ್ಟವನ್ನು ಕೇಳಿದ್ದರು. ಬಿಲ್ಲವ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ ಅವರ ನೇತೃತ್ವದಲ್ಲಿ ಬೋಟ್ ನಲ್ಲಿ ತೆರಳಿ ಮೀನುಗಾರರ ನೈಜ ಬದುಕನ್ನು ಅರ್ಥಮಾಡಿಕೊಂಡು ತನ್ನ ಸಹೋದರ ಡಿ ಕೆ ಶಿವಕುಮಾರ್ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಅದರಂತೆ ಇತ್ತೀಚೆಗೆ ಅಶೋಕ್ ಪೂಜಾರಿ ಹಾಗು ಮೀನುಗಾರಿಕಾ ಮುಖಂಡರನ್ನು ಬೆಂಗಳೂರಿಗೆ ಕರೆಸಿ ಮೀನುಗಾರರ ಸಮಸ್ಯೆಯನ್ನು ಡಿಕೆ ಶಿವಕುಮಾರ್ ಆಲಿಸಿ ಉಭಯ ಜಿಲ್ಲೆಗೆ ಆಗಮಿಸಿ ಮೀನುಗಾರರೊಂದಿಗೆ ಸಂವಾದವನ್ನು ಏರ್ಪಡಿಸುವ ಇಚ್ಛೆ ಶಿವಕುಮಾರ್ ವ್ಯಕ್ತಪಡಿಸಿದ್ದರು ಅಂತೆಯೇ ಮೂರು ಜಿಲ್ಲೆಯಲ್ಲಿ ಡಿ.ಕೆ ಶಿವಕುಮಾರ್ ಪ್ರವಾಸ ಕೈಗೊಂಡಿದ್ದು ಸಂಚಲನ ಸೃಷ್ಟಿಸಿದೆ.
