ಬೆಂಗಳೂರು : ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನಳಲ್ಲಿ ನೈರುತ್ಯ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಹಾರಾಷ್ಟ್ರ, ಕೇರಳ, ಗೋವಾ, ಕರ್ನಾಟಕದಲ್ಲಿ ಜುಲೈ 11 ರ ವರೆಗೂ ಭಾರೀ ಮಳೆಯಾಗುವ ಬಗ್ಗೆ ಇಲಾಖೆ ಸೂಚನೆ ನೀಡಿದೆ.
ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯಿಂದ ನೈರುತ್ಯ ಮುಂಗಾರು ಬಲಗೊಳ್ಳಲಿದ್ದು, ಕರಾವಳಿ ರಾಜ್ಯಗಳಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದೆ ಂದು ಇಲಾಖೆ ಹೇಳಿದೆ.
ಕೇರಳದ ನಂತರ ಜೂನ್ 6 ರಂದು ಮುಂಗಾರು ರಾಜ್ಯ ಪ್ರವೇಶಿಸಿತ್ತು. ಆದರೆ, ಎರಡನೇ ವಾರದಲ್ಲೇ ಮಳೆ ಕ್ಷೀಣಿಸಿತ್ತು ಇದು ರೈತರನ್ನು ಕಂಗಾಲು ಮಾಡಿತ್ತು. ಹಲವು ದಿನಗಳ ನಂತರ ಮತ್ತೆ ಮಳೆ ಆರಂಭಗೊಂಡಿದೆ. ಜುಲೈ 10 ರಿಂದ ಎರಡು ದಿನ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ ತಿಂಗಳಲ್ಲಿ ಅಧಿಕ ಮಳೆ ಸಾಧ್ಯತೆ ಇದ್ದು, 94 ರಿಂದ 106%(ದೀರ್ಘಾವಧಿ ಸರಾಸರಿ) ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ.