ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಅನಾರೋಗ್ಯಕ್ಕೆ ತುತ್ತಾಗಿ, ಉಡುಪಿ ನಗರದ ನಾಯರ್ ಕೆರೆ ಎಂಬಲ್ಲಿ ಅನಾಥ ಸ್ಥಿತಿಯಲ್ಲಿ ದಿನಗಳ ಕಳೆಯುತ್ತಿದ್ದ, ಅಪರಿಚಿತ ಬಾಲಕನನ್ನು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ, ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕಳೆದ ಜು.9 ರಂದು ದಾಖಲು ಪಡಿಸಿದ್ದರು. ಬಾಲಕನು ಮಾತನಾಡುವ ಸ್ಥಿತಿಯಲ್ಲಿಲ್ಲದೆ ಇರುವುದರಿಂದ, ಹೆಸರು ವಿಳಾಸ ತಿಳಿದು ಬಂದಿರಲಿಲ್ಲ. ನಾಗರಿಕ ಸಮಿತಿಯ ಕಾರ್ಯಕರ್ತರು ವಾರಸುದಾರರ ಪತ್ತೆಗೊಳಿಸಲು, ಮಾಧ್ಯಮ ಪ್ರಕಟಣೆಯನ್ನು ನೀಡಿದ್ದರು. ಆದರೆ ಯಾರೊಬ್ಬರೂ ಸಂಪರ್ಕಿಸಿರಲಿಲ್ಲ. ಅನಾಥ ಸ್ಥಿತಿಯಲ್ಲಿರುವ ಬಾಲಕನ ಕುರಿತು, ನಾಗರಿಕ ಸಮಿತಿಯ ಕಾರ್ಯಕರ್ತರು, ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಅವರಿಗೆ, ಮೌಖಿಕವಾಗಿ ಮಾಹಿತಿ ನೀಡಿದ್ದರು. ತಕ್ಷಣ ಸ್ಪಂದಿಸಿರುವ ಅವರು, ಗುಣಮುಖರಾಗಿರುವ ಬಾಲಕನನ್ನು ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಗೊಳಿಸಿದರು. ಆ ಬಳಿಕ ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ನೆಲೆ ಕಲ್ಪಿಸಿರುವರು. ಆಶ್ರಮ ಸಂಚಾಲಕರಾದ ತುನುಲಾ ತರುಣ್, ವಿನಯಚಂದ್ರ ಸಾಸ್ತಾನ ಅವರು ಬಾಲಕನಿಗೆ ಆಶ್ರಯ ಒದಗಿಸಿ ಮಾನವೀಯತೆ ಮೆರೆದರು. ಕಾರ್ಯಚರಣೆಯಲ್ಲಿ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಭಾಗಿಯಾಗಿದ್ದರು. ಹಾಗೂ ಕಾರ್ಯಚರಣೆಗೆ ಉಚಿತ ಅಂಬುಲೇನ್ಸ್ ಸೇವೆಯನ್ನು ಒದಗಿಸಿದರು. ಬಾಲಕನಿಗೆ ಅಂದಾಜು 17 ವರ್ಷ ಪ್ರಾಯವಾಗಿದ್ದು, ಬುದ್ದಿ ಮಾಂದ್ಯತೆ ಇರುವುದು ಕಂಡುಬಂದಿದೆ. ಪಶ್ಚಿಮ ಬಂಗಾಳದ ನಿವಾಸಿ ಎಂದು ಶಂಕಿಸಲಾಗಿದೆ. ಸಂಬಂಧಿಕರು ತುರ್ತಾಗಿ ಮಣಿಪಾಲ ಹೊಸಬೆಳಕು ಆಶ್ರಮದ ಸಂಚಾಲಕರನ್ನು ಸಂಪರ್ಕಿಸಲು ಸೂಚಿಸಲಾಗಿದೆ.
