ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರು ಗ್ರಾಮದ ಹರ್ತಟ್ಟು ಭಾಗದ ಸುಮಾರು 70 ಎಕ್ಕರೆ ಭತ್ತದ ಕೃಷಿ ಭೂಮಿ ಬಾರಿ ಮಳೆಯ ಅವಾಂತರದಿಂದ ಹೊಳೆ ನೀರು ನುಗ್ಗಿ ಜಲಾವೃತಗೊಂಡಿದೆ. ಕಳೆದ ಹಲವಾರು ವರ್ಷಗಳಿಂದ ರೈತ ಸಮುದಾಯ ಈ ಭಾಗದ ಗೋಳು ಕೇಳುವರಿಲ್ಲದಾಗಿದೆ. ಪ್ರತಿವರ್ಷ ಮಳೆಗಾಲ ಬಂತೆಂದರೆ ಹೊಳೆಯ ನೀರು ಮೇಲಕ್ಕೆ ಉಕ್ಕಿ ಬಾರೀ ಪ್ರಮಾಣದ ಭತ್ತದ ಕೃಷಿ ಭೂಮಿ ಹಾನಿಗೊಳ್ಳುತ್ತದೆ, ಈ ಬಗ್ಗೆ ಸ್ಥಳೀಯ ರೈತಧ್ವನಿ ಸಂಘ ಕೃಷಿ ಇಲಾಖೆ ಮೂಲಕ ಮಾಹಿತಿ ತಿಳಿಸಿ ಸರಕಾರದ ಅರೆಬರೆಯ ಹಾನಿ ಪ್ರಮಾಣದ ಸಹಾಯಧನ ನೀಡಲಾಗುತ್ತಿದೆ. ಆದರೆ ರೈತರ ಹಲವು ವರ್ಷಗಳ ಹೊಳೆ ಹೂಳೆತ್ತುವ ಕೂಗು ಕೂಗಾಗಿಯೇ ಉಳಿದಿದೆ.

ನಾಟಿಕಾರ್ಯ ನಡೆಸಿ ತಿಂಗಳಾಗಿಲ್ಲ ಭಾಗಶಃ ಹಾನಿ :
ಪ್ರತಿವರ್ಷ ಈ ಭಾಗದ ನೆರೆ ಹಾವಳಿ ಕೇಳುವವರಿಲ್ಲವಾಗಿದೆ. ಸಮಸ್ಯೆ ಪರಿಹಾರ ಮಾಡಬೇಕಾದ ಜನಪ್ರತಿನಿಧಿಗಳ ಇತ್ತ ನೋಡದೆ ಕೃಷಿಕರನ್ನು ಹೈರಾಣವಾಗಿಸಿದ್ದಾರೆ. ಕೃಷಿ ಕಾಯಕ ನಡೆಸಿ ನಷ್ಟ ಅನುಭವಿಸುಕ್ಕಿಂತ ಹಡಿಲಾಗಿಸುವುದೇ ಲೇಸು ಎನ್ನುವಂತಾಗಿದೆ. ಹೀಗಾಗಿ ಇಲ್ಲಿನ ಕೆಲಕೃಷಿ ಭೂಮಿಗಳು ಹಡಿಲಾಗಿಸುತ್ತಿದ್ದಾರೆ.

ಕಣ್ಣು ಹಾಯಿಸಬೇಕಿದೆ ಜನಪ್ರತಿನಿಧಿಗಳು :
ಈ ದೇಶದ ಬೆನ್ನೆಲುಬು ಕೃಷಿಕ ಎಂದು ಭಾಷಣದಲ್ಲಿ ಬಿಗಿಯುವ ಜನಪ್ರತಿನಿಧಿಗಳು ಕೃಷಿಕರ ಗೋಳು ಕೇಳುವುದರಲ್ಲಿ ಎಡವಿದ್ದಾರೆ. ಇಲ್ಲಿನ ಈ ಸಮಸ್ಯೆ ಮೂಲಸ್ವರೂಪ ಕೃಷಿ ಭೂಮಿಯ ಸಮೀಪ ಹಾದುಹೋಗುವ ಹೊಳೆಯಲ್ಲಿ ಕೆಸುರು(ಹೂಳು)ತುಂಬಿದ್ದು, ಅದನ್ನು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಿದೆ. ಅಲ್ಲದೆ ಭಾರೀ ಪ್ರಮಾಣದ ಕೃಷಿ ಭೂಮಿಯ ದೂರ ಕ್ರಮಿಸುವ ಹೊಳೆಗೆ ದಡೆ ದಂಡೆ ಕಲ್ಪಿಸಿದರೆ ಈ ಎಲ್ಲಾ ಸಮಸ್ಯೆಗೆ ಮುಕ್ತಿಗಾಣಬಹುದಾಗಿದೆ, ಇದರಿಂದ ಕೃಷಿ ಕಾಯಕಕ್ಕೆ ನಿರ್ಭಯದಿಂದ ರೈತ ಇಳಿಯಲು ಹಿಂಜರಿಯನು ಎಂಬುವುದು ಮಾಧ್ಯಮ ಕಳಕಳಿಯಾಗಿದೆ.

ನೆರೆ ಬಂದರೆ ಇಳಿಯಲು 15 ದಿನ ಬೇಕು!
ಈ ಭಾಗದಲ್ಲಿ ಒಂದೆರೆಡು ದಿನ ಮಳೆ ಬಂದರೆ ಹೊಳೆಯಿಂದ ಉಕ್ಕುವ ನೀರು ಇಳಿದು ಹೋಗಬೇಕಾದರೆ 15 ದಿನಗಳು ಬೇಕಾಗುತ್ತದೆ ಎನ್ನುತ್ತಾರೆ ರೈತರು. ಹೀಗಾಗಿ ಈ ಭಾಗದಲ್ಲಿ ಭತ್ತದ ನಾಟಿ ಕಾರ್ಯ ನಡೆಸಿ ಸಂತುಷ್ಟರಾಗುವರೊಳಗೆ ಕೊಳೆತು ಭಸ್ಮವಾಗಿ ಬಿಡುತ್ತದೆ. ಇದರಿಂದ ಅಸಾಯಕರಾದ ರೈತ ಸಮುದಾಯ ಕೃಷಿ ಮಾಡದೆ ಹಡಿಲಾಗಿಸುತ್ತಿದ್ದಾರೆ
ಅತ್ತ ಸರಕಾರ ಹಡಿಲು ಭೂಮಿ ಕೃಷಿ, ಇತ್ತ ರೈತ ನೆರೆ ಕಂಗಾಲು :
ನೆರೆಹಾವಳಿಯಿಂದ ಕೃಷಿ ಮಾಡಲಾಗದೆ ರೈತರು ತಮ್ಮ ತಮ್ಮ ಕೃಷಿ ಭೂಮಿಯನ್ನು ಹಡಿಲಾಗಿಸುತ್ತಿದ್ದಾರೆ. ಇದು ಒಂದೆಡೆಯಾದರೆ, ಇನ್ನೊಂದೆಡೆ ಸರಕಾರ ಹಡಿಲು ಭೂಮಿ ಕೃಷಿ ಮಾಡುವ ತವಕದಲ್ಲಿದೆ. ಕೃಷಿಕರ ಸಮಸ್ಯೆ ಆಲಿಸಬೇಕಾದ ಸರಕಾರ ಹಡಿಲು ಭೂಮಿ ಕೃಷಿಕಾಯಕದಲ್ಲಿ ನಿರತವಾಗಿದೆ. ಹೀಗಾಗಿ ರೈತರ ಬಹುವರ್ಷಗಳ ಬೇಡಿಕೆ ಈಡೇರಿಸಿದರೆ ಕೃಷಿ ಕಾಯಕ ಇಮ್ಮಡಿಗೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಪ್ರತಿವರ್ಷ ಅಧಿಕಾರಿಗಳ ಭೇಟಿ ಪ್ರಯೋಜನ ಶೂನ್ಯ :

ಪ್ರತಿವóರ್ಷ ಮಳೆಗಾಲದ ನೆರೆಹಾವಳಿ ವಿಕ್ಷೀಸಲು ಅಧಿಕಾರಿಗಳ ತಂಡ ಭೇಟಿ ನೀಡುತ್ತದೆ. ವರದಿ ಸಹ ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂಬುವುದು ಅಧಿಕಾರಿಗಳ ವಾದ. ಇತ್ತ ಇಲ್ಲಿನ ರೈತ ಸಮುದಾಯ ಸ್ಥಳೀಯ ಪಂಚಾಯತ್ ಹಾಗೂ ಸರಕಾರದ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜ ಶೂನ್ಯವಾಗಿದೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮಕೈಗೊಂಡು, ಇಲ್ಲಿನ ಬಹುವರ್ಷಗಳ ಸಮಸ್ಯೆಗೆ ಮುಕ್ತಿಗಾಣಿಸಬೇಕಿದೆ

ಗಿರೀಶ್ ದೇವಾಡಿಗ, ಯುವ ಕೃಷಿಕರು ಹರ್ತಟ್ಟು ಕೋಟ :
ನಮ್ಮ ಈ ಭಾಗದ ಕೃಷಿ ಭೂಮಿಯ ನೆರೆ ಹಾವಳಿಯ ಸಮಸ್ಯೆ ಆಲಿಸಯವರಿಲ್ಲದಾಗಿದೆ ಯಾವ ಸರಕಾರ ರೈತರ ಸಮಸ್ಯೆಯನ್ನು ಪರಿಹರಿಸಬೇಕು ಆ ಸರಕಾರ ಮೌನ ವಹಿಸಿ ರೈತರನ್ನು ನಿರ್ಲಕ್ಷಿಸುತ್ತಿದೆ.ನಮ್ಮ ಕೃಷಿ ಹಾನಿಗೆ ಪರಿಹಾರ ಬೇಕಿಲ್ಲ ಬದಲಾಗಿ ಶಾಶ್ವತ ಪರಿಹಾರ ಒದಗಿಸಲಿ ಎಂಬುವುದೇ ನಮ್ಮ ಆಗ್ರಹ.

ಎಂ.ಜಯರಾಮ್ ಶೆಟ್ಟಿ,
ಅಧ್ಯಕ್ಷರು,
ರೈತಧ್ವನಿ ಸಂಘ ಕೋಟ :
ಈ ಕಾಲಘಟ್ಟದಲ್ಲಿ ಕೃಷಿ ಮಾಡುವುದೇ ಬಾರಿಕಷ್ಟಕರ ಅದರಲ್ಲಿ ನೆರೆಹಾವಳಿ ಹಾಗೂ ಅಂತರಗಂಗೆ ಹಾವಳಿಯಿಂದ ಕೃಷಿ ಮಾಡಲು ಹಿಂಜರಿಯುತ್ತಿದ್ದಾರೆ. ಹೊಳೆ ಹೂಳೆತ್ತಲು ಸಚಿವರಿಗೆ,ಶಾಸಕರಿಗೆ ಜಿಲ್ಲಾಧಿಕಾರಿಗಳಿ ರೈತಧ್ವನಿಯಿಂದ ಮನವಿ ಸಹ ನೀಡಲಾಗಿದೆ.ಈ ಬಗ್ಗೆ ಭರವಸೆ ಸಹ ನೀಡಿದ್ದಾರೆ ಕಾದುನೋಡಬೇಕಿದೆ.
