ನವದೆಹಲಿ : ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ, ಕರಾವಳಿ, ಮಲೆನಾಡು ಭಾಗಗಳಲ್ಲಿನ ಭಾರಿ ಮಳೆ, ಪ್ರಕೃತಿ ವಿಕೋಪ ನಿಯಂತ್ರಣ ಕ್ರಮಗಳ ಕುರಿತಂತೆ ಇಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವೀಡಿಯೋ ಸಂವಾದ ನಡೆಸಿ ಮಾಹಿತಿ ಪಡೆದರು.
ಇಂದು ಬೆಳಿಗ್ಗೆ 9 ಗಂಟೆಗೆ ತಮ್ಮ ದೆಹಲಿಯ ಕಛೇರಿ ಕೃಷಿ ಭವನಕ್ಕೆ ತೆರಳಿ ವಿಡಿಯೋ ಕಾನ್ಫೆರನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಮಳೆಯಿಂದಾಗಲಿರುವ ಪೃಕತಿ ವಿಕೋಪಗಳ ಕುರಿತು, ಜಿಲ್ಲೆಯಲ್ಲಿನ ಕೋವಿಡ್ ನಿರ್ವಹಣೆ, ಮೂರನೇ ಅಲೆಗೆ ಜಿಲ್ಲೆ ನಡೆಸಿರುವ ತಯಾರಿಗಳು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಚರ್ಚಿಸಿ ಮಾಹಿತಿ ಪಡೆದರು.
ಮಳೆಯಿಂದ ಆಗುತ್ತಿರುವ ಅನಾಹುತ, ಅವ್ಯವಸ್ಥೆಗಳ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಶೋಭಾ ಕರಂದ್ಲಾಜೆ ಅವರು ಜನರ ಕಷ್ಟ ನಷ್ಟಗಳಿಗೆ ಧಾವಿಸುವ ಸಂದರ್ಭ ಒದಗಿ ಬಂದರೆ ಸೂಕ್ತ ವ್ಯವಸ್ಥೆ ಮಾಡುವಂತೆ ಕೂಡ ಸೂಚಿಸಿದರು.
