ವರದಿ : ದಿನೇಶ್ ರಾಯಪ್ಪನಮಠ
ಬೇಳೂರು: ನಮ್ಮ ಗ್ರಾಮದ ಜನರಿಗೆ ಕಡಿಮೆ ಹಣದಲ್ಲಿ ಮರಳು ಲಭಿಸುವ ಅವಕಾಶವನ್ನು ಜಿಲ್ಲಾಡಳಿತ ಮಾಡಿಕೊಟ್ಟಿದೆ. ಇದರಿಂದ ಗ್ರಾಮ ಪಂಚಾಯತ್ಗೂ ಹೆಚ್ಚಿನ ಆದಾಯ ಬರಲಿದೆ. ಇಲಾಖೆಗಳು ಉತ್ತಮವಾಗಿ ಸ್ಪಂದಿಸಿದ್ದು ನಮ್ಮ ವ್ಯಾಪ್ತಿಯಲ್ಲಿ 6513 ಮೆಟ್ರಿಕ್ ಟನ್ ಮರಳು ತೆಗೆಯಲು ಅವಕಾಶ ನೀಡಲಾಗಿದ್ದು ಇದರಲ್ಲಿ ಈಗಾಗಲೇ 293 ಮೆಟ್ರಿಕ್ ಟನ್ ಮರಳು ಮೊದಲ ಹಂತದಲ್ಲಿ ವಿತರಣೆಯಾಗಿದೆ ಎಂದು ಬೇಳೂರು ಗ್ರಾಮ ಪಂಚಾಯತ್ ಮಾಜಿ ಆಧ್ಯಕ್ಷ ಕರುಣಾಕರ ಶೆಟ್ಟಿ ಹೇಳಿದರು.
ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಹೊಳೆ ಮತ್ತು ಹಿರೇಹೊಳೆಯಲ್ಲಿ ಗುರುತಿಸಲಾಗಿರುವ ಮರಳು ನಿಕ್ಷೇಪ ಪ್ರದೇಶಗಳಿಗೆ ಮರಳು ತೆಗೆಯಲು ಜಿಲ್ಲಾಡಳಿತ ಪುನರ್ ಅನುಮತಿ ನೀಡಿದ್ದರಿಂದ ಸಾರ್ವಜನಿಕರಿಗೆ ಮರಳು ವಿತರಿಸುವ ಕಾರ್ಯಕ್ರಮಕ್ಕೆ ಗುರುವಾರ ಪಂಚಾಯತ್ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು.
ಅವರು ಕುಂದಾಪುರ ತಾಲೂಕಿನ ವ್ಯಾಪ್ತಿಗೆ ಮಾತ್ರ ಈ ಮರಳು ನೀಡುವ ಆದೇಶವಿದ್ದು ಪ್ರತಿಯೊಬ್ಬ ಫಲನುಭವಿಗಳು ತಮ್ಮ ವೈಯಕ್ತಿಕ ದಾಖಲೆ ಮತ್ತು ಕಟ್ಟಡ ನಿರ್ಮಾಣದ ಛಾಯಾಚಿತ್ರ ಹಾಗೂ ಸ್ಥಳೀಯಾಡಳಿತಕ್ಕೆ ಯಾರಿಗೆ ಯಾವ ಉದ್ದೇಶಕ್ಕೆ ಎಲ್ಲಿಗೆ ಎಂಬ ಮಾಹಿತಿಯ ಮನವಿಯನ್ನು ನೀಡಿ ಮರಳು ಪರವಾನಿಗೆ ಪಡೆದುಕೊಂಡು ಮರಳು ತೆಗೆದುಕೊಳ್ಳಬಹುದಾಗಿದೆ ಎಂದರು.
ಸರ್ಕಾರದ ಆದೇಶದಂತೆ ಬೆಳಿಗ್ಗೆ 6 ರಿಂದ ಸಂಜೆ 6 ತನಕ ಮಾತ್ರ ಮರಳು ತೆಗೆದು ಸಾಗಾಟ ಮಾಡಲು ಅವಕಾಶ ನೀಡಲಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಡಕ್ಕೆಗಳಲ್ಲಿ ಮರಳು ಶೇಖರಣೆ ಮಾಡುವಂತಿಲ್ಲ. ಮರಳು ತೆಗೆಯಲು ಯಾರಿಗೂ ಗುತ್ತಿಗೆ ನೀಡುವುದಿಲ್ಲಾ, ನೀಡುವ ಅಧಿಕಾರವು ನಮಗೆ ಇಲ್ಲ. ಖಾಸಗಿಯಾಗಿ ಮರಳು ತೆಗೆಯುವರನ್ನು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗೊತ್ತುಪಡಿಸಿ ಮರಳು ವಿತರಿಸುವ ವ್ಯವಸ್ಥೆಗೆ ಮುಂದಾಗಿದ್ದೇವೆ. ಎಲ್ಲಾ ಕಾರ್ಯ ಚಟುವಟಿಕೆಗಳು ಜಿಲ್ಲಾಡಳಿತದ ಆದೇಶ ಮೇರೆಗೆ ಹಾಗೂ ಕಾನೂನುನಿನ ಚೌಕಟ್ಟಿನಲ್ಲಿ ನಡೆಯಲಿದೆ ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೋಟ ಪೊಲೀಸ್ ಠಾಣೆಯ ಬೀಟ್ ಪೊಲೀಸ್ ಸಿಬ್ಬಂದಿ ಕೃಷ್ಣ ಮಾರ್ಕೋಡು, ಪಂಚಾಯತ್ ಸದಸ್ಯರಾದ ಉಷಾ ಕೊಠಾರಿ, ರಾಘವೇಂದ್ರ ಮರಕಾಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಉಪಸ್ಥಿತರಿದ್ದರು.
