ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ನಳಿನ್ ಕುಮಾರ್ ಕಟೀಲ್ ಅವರು ಸೂಕ್ಷ್ಮಮತಿಯವರು. ಸಂಘಟನೆಯ ಸೂತ್ರ ಗೊತ್ತಿರುವವರು. ಅಂತಹುದರಲ್ಲಿ ಅವರ ಹೆಸರಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ನನಗೆ ಈ ಆಡಿಯೋ ಬಗ್ಗೆ ಶಂಕೆ ಇದೆ. ಈ ಆಡಿಯೋ ಬಗ್ಗೆ ತನಿಖೆಯಾಗಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತಿದ್ದೇನೆ. ಕುಚೋದ್ಯರು, ಸುಳ್ಳು ಆಡಿಯೋ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ. ಸೋಮವಾರ ಕುಂದಾಪುರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಈ ಬಗ್ಗೆ ತನಿಖೆ ನಡೆಯುತ್ತದೆ. ನಳಿನ್ ಕುಮಾರ್ ಕಟೀಲ್ ಸ್ವರಭಾರೆ ಇದಲ್ಲ ಎಂದು ನನಗನಿಸುತ್ತದೆ ಎಂದರು.
ಮಾರಣಕಟ್ಟೆ ದೇವಸ್ಥಾದಿಂದಲೂ ಕಲಾವಿದರಿಗೆ ಪೂರ್ಣ ಸಂಭಾವನೆ :

ದೇವಸ್ಥಾನಗಳ ಮೇಳಗಳ ಕಲಾವಿದರಿಗೆ ಪೂರ್ಣ ಸಂಭಾವನೆ ಕೊಡಲು ಆದೇಶಿಸಲಾಗಿದೆ. ಬಹುತೇಕ ಕಡೆಗಳಲ್ಲಿ ಕೊಡಲಾಗಿದೆ. ಆದರೆ, ಮಾರಣಕಟ್ಟೆಯಲ್ಲಿ ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಮಾರಣಕಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಸಂಬಳ ಬಿಡುಗಡೆ ಮಾಡುವಂತೆ ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಅಧಿಕಾರಿಗಳು ದೇವಸ್ಥಾನದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಪೂರ್ತಿ ಸಂಬಳ ಕೊಡುವ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ. ಒಂದೆರಡು ದಿನಗಳಲ್ಲಿ ಪಾವತಿಯಾಗಲಿದೆ ಎಂದರು.
ಸರ್ಕಾರಿ ಜಾಗ ಕಾದಿರಿಸಿ ಹಕ್ಕುಪತ್ರ ವಿತರಣೆ:
ಗೋಮಾಳದಲ್ಲಿ ಬೇರೆ ಬೇರೆ ಕಾರ್ಖಾನೆಯವರು, ರೆಸಿಡೆನ್ಸಿಯವರು ಕಬಳಿಸಿದ್ದೂ ಇದೆ. ಆದರೆ, ಈಗ ಗೋಮಾಳ ಸಂರಕ್ಷಿಲು ಸರ್ಕಾರ ಸೂಚಿಸಿದೆ. ಕೆಲವೆಡೆ ಬಡವರು ಗೋಮಾಳದಲ್ಲಿ ಮನೆ ಕಟ್ಟಿಕೊಂಡಾಗಿದೆ. ಆ ಗೋಮಾಳ ಜಾಗಕ್ಕೆ ಹಕ್ಕು ಪತ್ರಗಳನ್ನು ಕೊಡುವ ವೇಳೆ ಮತ್ತೊಂದು ಸರ್ಕಾರಿ ಜಾಗವನ್ನು ಕಾದಿರಿಸಿಕೊಂಡು ಕೊಡಬೇಕು. ಈ ಮೂಲಕ ಬಡವರಿಗೆ ಮನೆಯ ಜೊತೆಗೆ ಗೋಮಾಳ ರಕ್ಷಣೆ ಆದಂತೆಯೂ ಆಗುತ್ತದೆ ಎಂದರು.
ಹೊಸದಾಗಿ ಮನೆ ಕಟ್ಟುವವರಿಗೆ 5 ಲಕ್ಷ:

75% ನಷ್ಟು ಕುಸಿದಿರುವ ಬಡವರ ಮನೆಗಳನ್ನು 5 ಲಕ್ಷ ರೂ.ನಲ್ಲಿ ಮನೆ ಕಟ್ಟಿಕೊಡಲು ಸರ್ಕಾರ ಹೇಳಿದೆ. ಇಲ್ಲಿ 1 ಲಕ್ಷ ರೂ. ತುರ್ತಾಗಿ ನೀಡಲಾಗಿದೆ. ನೀರು ಯಾರ ಮನೆಗೆ ನುಗ್ಗಿದೆಯೋ ಅವರಿಗೆ 10,000 ರೂ. ಕೊಡಲಾಗಿದೆ. ಕುಸಿದ ಮನೆಯವರಿಗೆ ಈಗಾಗಲೇ 1 ಲಕ್ಷ ಕೊಟ್ಟಿದ್ದು, ಅವರು ರಿಪೇರಿ ಮಾಡಿಕೊಂಡು ಹೊಸ ಮನೆ ಕಟ್ಟುವುದಿಲ್ಲ ಎಂದಿದ್ದಾರೆ. ಯಾರು ಹೊಸದಾಗಿ ಮನೆ ಕಟ್ಟಲು ಪಂಚಾಂಗ ಹಾಕುವರೋ ಅವರಿಗೆ ಮಾತ್ರ 5 ಲಕ್ಷ ರೂ. ವಿರಿಸಲಾಗುವುದು ಎಂದರು.
ಸೀಮಿತ ಭಕ್ತರಿಗೆ ದೇವಾಲಯದಲ್ಲಿ ಅನ್ನದಾಸೋಹ ನಡೆಸಲು ಚರ್ಚಿಸಲಾಗಿದೆ. ದೂರದಿಂದ ಭರುವ ಭಕ್ತರಿಗೆ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ದೇವಸ್ಥಾನದಲ್ಲಿ ಅನ್ನದಾಸೋಹ ನಡೆಸುವ ಕುರಿತು ಚರ್ಚಿಸಲಾಗಿದೆ. ಕೆಲವು ದಿನಗಳಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದರು.
ಕೊಲ್ಲೂರು ಒಳಚರಂಡಿ ತನಿಖೆ:

ಕೊಲ್ಲೂರು ಒಳಚರಂಡಿಯಲ್ಲಿ ಅವ್ಯವಹಾರವಾಗಿದೆ ಎಂದು ದೂರು ಬಂದ ಹಿನ್ನೆಲೆ ಕಮೀಷನರ್ ಗೆ ತನಿಖೆ ಮಾಡಲು ಸೂಚಿಸಲಾಗಿದೆ. ತನಿಖೆಯ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಹಾಸ್ಟೆಲ್ ಆರಂಭದ ಬಗ್ಗೆ ಪರಿಶೀಲನೆ:
ಕಾಲೇಜ್ ಗಳು ಪ್ರಾರಂಭವಾದ ನಂತರ ಹಾಸ್ಟೆಲ್ ಗಳನ್ನು ಪ್ರಾರಂಭ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಒಂದು ಕಮಿಟಿಯನ್ನು ರಚಿಸಿ ಹಾಸ್ಟೆಲ್ ನ ಅಡುಗೆ ಕೆಲಸ, ಟೆಂಡರ್ ಗಳ ಪರಿಶೀಲನೆ ನಡೆಸಲು ಸದಸ್ಯರನ್ನು ನೇಮಕ ಮಾಡಲಾಗುತ್ತದೆ

