ವರದಿ : ದಿನೇಶ್ ರಾಯಪ್ಪನಮಠ
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ದುಡ್ಡು ಕೀಳುವವರ ಗುಂಪೊಂದು ಸೃಷ್ಟಿಯಾಗಿದ್ದು, ಬಿಜೆಪಿಯ ನಾಯಕ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಕೇಳುತ್ತಿರುವ ಬಗ್ಗೆ ಸೋಮವಾರ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರು ಉಡುಪಿ ನಗರ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಿಂಗಳೆ ವಿಕ್ರಮಾರ್ಜುನ ಎಂಬ ಹೆಸರಲ್ಲಿ ನಕಲಿ ಖಾತೆ ತೆರೆದು ವಿಕ್ರಮಾರ್ಜುನ ಹೆಗ್ಗಡೆಯವರ ಆಪ್ತರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆಪ್ತರಲ್ಲಿ ಕೆಲವರು ತಿಂಗಳೆ ಅವರಿಗೆ ಕರೆ ಮಾಡಿ ಈ ಮಾಹಿತಿ ನೀಡಿದ ಬಳಿಕ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತನ್ನ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ನಕಲಿ ಖಾತೆ ತೆರೆದಿದ್ದಾರೆ ಎಂದು ಹಂಚಿಕೊಂಡಿದ್ದರು.


ಉಡುಪಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಇಂತಹ ಘಟನೆಗಳು ನಡೆದಾಗ ನಾವು ಮೌನವಾಗಿರುವುದು ತಪ್ಪಾಗುತ್ತದೆ. ನಮಗೆ ಆತ್ಮೀಯರಾದವರೇ ಫೇಸ್ ಬುಕ್ ಮೂಲಕ ಹಣ ಕೇಳುದಿಲ್ಲ ಎಂಬುದನ್ನು ಎಲ್ಲರೂ ಮನದಲ್ಲಿಟ್ಟುಕೊಳ್ಳಬೇಕು. ಇವತ್ತು ಕೇವಲ ಹಣ ಕೇಳಿದ್ದಾ.ರೆ ಆದರೆ ನಾಳೆ ನಕಲಿ ಖಾತೆಯ ಮೂಲಕ ದೇಶದ್ರೋಹದ ಹೇಳಿಕೆ ಪ್ರಕಟಿಸಿದರೂ ಆಶ್ಚರ್ಯ ಇಲ್ಲ. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚಬೇಕೆಂದು ಆಗ್ರಹಿಸಿದರು.
