ಉಚ್ಚಿಲ : ರಾ.ಹೆ. 66ರಿಂದ ಪಣಿಯೂರು – ಮುದರಂಗಡಿ ಸಂಪರ್ಕದ ಲೋಕೋಪಯೋಗಿ ರಸ್ತೆ ಹೊಂಡಾ ಗುಂಡಿಮಯವಾಗಿದ್ದು, ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಎಸ್ಡಿಪಿಐ ಕಾರ್ಯಕರ್ತರು ಮಂಗಳವಾರ ಗುಂಡಿಯಲ್ಲಿ ಗಿಡ ಇಟ್ಟು ಪ್ರತಿಭಟಿಸಿ ಬಳಿಕ ತಾತ್ಕಾಲಿಕ ಶ್ರಮದಾನ ನಡೆಸಿದರು.

ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಕಾಟಚಾರಕ್ಕೆ ಬಿಡಿಸಲಾದ ಅಸಮರ್ಪಕವಾದ ಚರಂಡಿಯಿಂದಾಗಿ ನೀರು ಹರಿದು ಹೋಗಲಾಗದೆ ಅಲ್ಲಲ್ಲಿ ಕೊಳಚೆ ನೀರು ಶೇಖರಣೆಗೊಳ್ಳುತ್ತಿದೆ. ಜೋರಾಗಿ ಮಳೆ ಸುರಿದಾಗ ಕೊಳಚೆ ನೀರು ರಸ್ತೆಯಲ್ಲಿ ಹರಿದು ಗುಂಡಿಗಳಾಗಿ ವಾಹನ ಸವಾರರು,ಸಾರ್ವಜನಿಕರು ಸಂಕಟ ಅನುಭವಿಸುವಂತಾಗಿದೆ. ದ್ವಿಪಥ ರಸ್ತೆ ನಿರ್ಮಾಣದ ಹೆಸರಿನಲ್ಲಿ ನಿರ್ಮಿಸಲಾದ ಮೋರಿಯ ಇಕ್ಕೆಲಗಳಲ್ಲಿ ಹೊಂಡಗಳಾಗಿದ್ದು, ಅನೇಕರು ಇದರಿಂದಾಗಿ ಬಿದ್ದು ಗಾಯಗೊಂಡಿದ್ದಾರೆ.

“ವಾಹನ ಸವಾರರ ಬೆನ್ನುಮೂಳೆ ಮುರಿಯಲಿ,ಗುಂಡಿಗೆ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳಲಿ, ಆದರೆ,ಅದಕ್ಕೂ ನಮಗೂ ಸಂಬಂಧವೇ ಇಲ್ಲ” ಎಂಬಂತೆ ಸಂಬಂಧಿತ ಇಲಾಖೆ ವರ್ತಿಸುತ್ತಿದೆ ಎಂದು ಆರೋಪಿಸಿ ಇದರ ವಿರುದ್ಧ ಗುಂಡಿಯಲ್ಲಿ ಗಿಡ ಇಟ್ಟು ಪ್ರತಿಭಟಿಸಿದ ಎಸ್ಡಿಪಿಐ ಕಾರ್ಯಕರ್ತರು ಬಳಿಕ ಶ್ರಮದಾನ ನಡೆಸಿದರು. ಈ ಬಗ್ಗೆ ಸ್ಥಳೀಯ ನಿವಾಸಿ ಹರಿಶ್ಚಂದ್ರ ಹಾಗು ನೂರು ನವಾಝ್ ಮಾತನಾಡಿ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಉಚ್ಚಿಲ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಿರಾಜ್ ಎನ್.ಎಚ್. ಎಸ್ಡಿಪಿಐ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾ.ಪಂ
ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಈ ಸಂದರ್ಭ ಎಸ್.ಡಿ.ಪಿ.ಐ. ಉಚ್ಚಿಲ ಪಂಚಾಯತ್ ಸಮಿತಿ ಅಧ್ಯಕ್ಷ ರಝಕ್ ವೈ.ಎಸ್., ಎಸ್.ಡಿ.ಪಿ.ಐ.ಬೆಂಬಲಿತ ಗ್ರಾ.ಪಂ ಸದಸ್ಯ ಆಸೀಫ್ ವೈಸಿ, ಸೌಲತ್, ಅಬ್ದುಲ್ ಮಜೀದ್, ರುಮಾನ, ಹಾಗೂ ಮುಖಂಡರಾದ ಹಮೀದ್ ಎನ್ .ಎಚ್., ಇಬ್ರಾಹಿಮ್ ಪಲಿಮಾರ್, ಅಬ್ದುಲ್ ರೆಹಮಾನ್ ದಾವೂದು ಮತ್ತಿತರರು ಜೊತೆಗಿದ್ದರು.
