ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋವಿಡ್ ನಿಂದ ಸಮಾಜ ಸಾಕಷ್ಟು ಬದಲಾವಣೆ ಕಂಡಿದೆ. ಇದರ ಭಾಗವಾಗಿ ಸರಕಾರಿ ಆಸ್ಪತ್ರೆಗಳ ಮಹತ್ವ ಜನರಿಗೆ ತಿಳಿಯುವಂತಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ ಎಸ್.ಕೆ. ಹೇಳಿದ್ದಾರೆ
ಬುಧವಾರ ಶ್ರೀ ರಾಮಾಂಜನೇಯ ವಿವಿದ್ದೋದ್ಧೇಶ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ, ವೀರ ಕೇಸರಿ ಸ್ಪೋಟ್ರ್ಸ್ ಕ್ಲಬ್ ಕೋಡಿ ತಲೆ, ಸಮಧುರ ಯುವಕ ಮಂಡಲ ಕೋಡಿ ಕನ್ಯಾಣ, ಪ್ರಗತಿ ಯುವಕ ಮಂಡಲ ಕೋಡಿ ಕನ್ಯಾಣ, ಜಿಲ್ಲಾಸ್ಪತ್ರೆ ರಕ್ತನಿಧಿಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಘ ಸಂಸ್ಥೆಗಳು ಸರಕಾರದ ಭಾಗವಾಗಿ ಕೆಲಸ ನಿರ್ವಹಿಸುತ್ತಿವೆ. ಇದಕ್ಕೆ ಪೂರಕವಾಗಿ ರಕ್ತದಾನದಂತಹ ಕಾರ್ಯಕ್ರಮಗಳ ಮೂಲಕ ಸಂಘಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದೊಂದು ಶ್ಲಾಘನೀಯ ಕಾರ್ಯ. ರಕ್ತದ ಮಹತ್ವ ಅಪಘಾತ ಸಂದರ್ಭದಲ್ಲೆ ಹೆಚ್ಚಾಗಿ ತಿಳಿಯುತ್ತದೆ. ರಕ್ತದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು, ಕೋವಿಡ್ ಸಂದರ್ಭದಲ್ಲಿ ರಕ್ತದ ಅವಶ್ಯಕತೆಯನ್ನು ಅರಿತು ಒಂದಿಷ್ಟು ಜೀವಗಳಿಗೆ ಜೀವ ನೀಡುವ ಕಾಯಕ ಸಂಘಸಂಸ್ಥೆಗಳಿಂದ ಆಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ವೀಣಾ ಕುಮಾರಿ ಮಾತನಾಡಿ, ರಕ್ತದಾನದ ಅರಿವು ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರಮುಖವಾಗಿ ತಿಳಿಯಬೇಕಾದ ವಿಚಾರಗಳನ್ನು ಮನವರಿಕೆ ಮಾಡಿ ವ್ಯಾಕ್ಸಿನ್ ಪಡೆದ ಅಥವಾ ಪಾಸಿಟಿವ್ ಬಂದ ವ್ಯಕ್ತಿಗಳು ಕನಿಷ್ಠಪಕ್ಷ ಮೂರು ತಿಂಗಳು ರಕ್ತದಾನ ಮಾಡಲು ಅರ್ಹರಲ್ಲ. ನಂತರ ದಿನಗಳಲ್ಲಿ ರಕ್ತದಾನ ಮಾಡಬಹುದಾಗಿದೆ. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಲು ಸಲಹೆ ನೀಡಿದರು.ಇತ್ತೀಚಿಗಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚುತ್ತಿವೆ ಈ ನಿಟ್ಟಿನಲ್ಲಿ ಜಿಲ್ಲಾವಾರು ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳು ರಕ್ತದಾನ ಕಾರ್ಯಕ್ರಮ ಮಾಡಲು ಹೇಳಿದರು. ಅಧ್ಯಕ್ಷತೆಯನ್ನು ಶ್ರೀ ರಾಮಾಂಜನೇಯ ವಿವಿದ್ದೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭು ಪೂಜಾರಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆ ಬೆಂಗಳೂರು ಇದರ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್,ಸುಮಧುರ, ಯುವಕ ಮಂಡಲ ಕೋಡಿ ಕನ್ಯಾಣ ಅಧ್ಯಕ್ಷ ವಾಸುದೇವ ಕಾಂಚನ್, ಪ್ರಗತಿ ಯುವಕ ಮಂಡಲ ಕೋಡಿ ಕನ್ಯಾಣ ಅಧ್ಯಕ್ಷ ಜಗನಾಥ್ ಅಮೀನ್ ಕೋಡಿ, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಪ್ರಭಾಕರ ಮೆಂಡನ್, ವೀರಕೇಸರಿ ಸ್ಪೋಟ್ರ್ಸ್ ಕ್ಲಬ್ ಸದಸ್ಯ ನಿಖಿಲ್ ಖಾರ್ವಿ ಉಪಸ್ಥಿತರಿದ್ದರು.
ರಾಮಾಂಜನೇಯ ವಿವಿದ್ದೋದ್ಧೇಶ ಸಹಕಾರಿ ಸಂಘ ಮುಖ್ಯಕಾರ್ಯಾನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಮಹಾಬಲ ಕುಂದರ್ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರ ಕಾರ್ವಿ ವಂದಿಸಿದರು.
