ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ .ಆರ್ .ಪ್ರಕಾಶ್ ಮಾರ್ಗ ದರ್ಶನದಲ್ಲಿ ನೋಡಲ್ ಅಧಿಕಾರಿ ರಾಘವ ಶೆಟ್ಟಿಯವರ ನೇತೃತ್ವದಲ್ಲಿ 14 ಪರೀಕ್ಷಾ ಕೇಂದ್ರದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆ ಸೋಮವಾರ ಮತ್ತು ಗುರುವಾರ ನಡೆದಿದೆ. 1468 ಹುಡುಗರು ಮತ್ತು 1391 ಹುಡುಗಿಯರು ಒಟ್ಟು 2859 ವಿದ್ಯಾರ್ಥಿಗಳಲ್ಲಿ ಮೊದಲ ದಿನ 3 ಮತ್ತು ಗುರುವಾರ 4 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಪರೀಕ್ಷ ಕೇಂದ್ರವಾದ ಪೆರ್ಡೂರು 96, ಮಣಿಪಾಲ 260, ಮೌಂಟ್ ರೊಸರಿ 265, ಕೆಮ್ಮಣು142 , ಮಿಲಾಗ್ರೀಸ್ 139 , ಬ್ರಹ್ಮಾವರ ಬೋರ್ಡ ಹೈಸ್ಕೂಲ್ 253, ನಿರ್ಮಲ135, ಎಸ್. ಎಂ. ಎಸ್ 348, ಬಾರಕೂರು 197, ಆವರ್ಸೆ 122, ಮಂದಾರ್ತಿ 98, ಕೊಕ್ಕರ್ಣೆ 118, ಕೋಟ ವಿವೇಕ ಗರ್ಲ್ಸ್ 279, ಮತ್ತು ಬಾಯ್ಸ್ 253 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಪುನರಾವರ್ತಿತ ಅಭ್ಯರ್ಥಿಗಳು 32 ಮಂದಿ ಇದ್ದು 5 ಹೊರ ಜಿಲ್ಲೆಯವರಿದ್ದರು. ಒಟ್ಟು ಈ ಬಾರಿ 99 .43 ಶೇಕಡಾ ಹಾಜರಾತಿಯಾಗಿತ್ತು.
2 ವಿದ್ಯಾರ್ಥಿಗಳು ಕೋವಿಡ್ ಸೋಂಕು ಇದ್ದ ಕಾರಣ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಪರೀಕ್ಷೆ ಬರೆಯಲು ಅನುಕೂಲ ಸ್ಥಿತಿ ನಿರ್ಮಾಣ:
ಕೋವಿಡ್ ಹಿನ್ನೆಲೆಯಲ್ಲಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣ ಕೇಂದ್ರದಲ್ಲಿ ಹೆಚ್ಚಿಸಿದ 3 ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಮುಂದಿನ ದಿನದಲ್ಲಿ ಕೂಡಾ ಇದನ್ನು ಮುಂದುವರಿಸುವಂತೆ ವಿದ್ಯಾರ್ಥಿಗಳ ಮತ್ತು ಪೋಷಕರ ಒತ್ತಾಯವಾಗಿದೆ.
ಗ್ರಾಮೀಣ ಭಾಗವಾದ ನಾಲ್ಕೂರು ಮತ್ತು ನುಕ್ಕೂರು ಪ್ರೌಢ ಶಾಲಾ ವಿದ್ಯಾರ್ಥಿಗಳು 15 ಕಿಮಿ ದೂರದ ಆವರ್ಸೆಗೆ ಮತ್ತು 20 ಕಿಮಿ ದೂರದ ಮಂದಾರ್ತಿಗೆ ಹೋಗಬೇಕಾಗಿದ್ದು, ಈ ಬಾರಿ ಪ್ರಥಮ ಬಾರಿಗೆ ಕೊಕ್ಕರ್ಣೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಪರೀಕ್ಷಾ ಕೇಂದ್ರ ಮಾಡಿದ ಕಾರಣ 6 ಕಿಮಿ ಅಂತರದಲ್ಲಿ ಬರುವಂತಾಗಿದೆ. ಬ್ರಹ್ಮಾವರ ನಿರ್ಮಲ ಗರ್ಲ್ಸ್ ಸ್ಕೂಲ್ ಮತ್ತು ಕಲ್ಯಾಣಪುರ ಮೌಂಟ್ ರೋಸರಿ ಶಾಲೆಯ ಪರೀಕ್ಷಾ ಕೇಂದ್ರ ಕೂಡಾ ವಿದ್ಯಾರ್ಥಿಗಳಿಗೆ ನೆರವಾಗಿದೆ.
