ವರದಿ:ಬಿ. ಎಸ್. ಆಚಾರ್ಯ
ಬ್ರಹ್ಮಾವರ: ನೆಂಚಾರು ಕರಬರಬೆಟ್ಟು ಎಂಬಲ್ಲಿ ಮನೆಯ ಬಾಗಿಲು ಒಡೆದು ಪೂಜಾ ಸಾಮಾಗ್ರಿ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮತ್ತು ಹೆಣ್ಮುಂಜೆ ಗ್ರಾಮದ ಪ್ರಬಾಡಿ ಮೂಲ ಜಟ್ಟಿಗೆ ಮತ್ತು ಬ್ರಹ್ಮ ದೈವಸ್ಥಾನದ ಕಂಚಿನ ಘಂಟೆಗಳು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶೃಂಗೇರಿ ನಿವಾಸಿ ಗೋಪಾಲ (26), ಕೊಕ್ಕರ್ಣೆ ನಿವಾಸಿ ಅರುಣ (26), ಚೇರ್ಕಾಡಿ ನಿವಾಸಿ ರವಿ ಕುಮಾರ್, ಮತ್ತು ಸಾಸ್ತಾನ ಗುಂಡ್ಮಿ ನಿವಾಸಿ ರಜಾಕ್ (41) ಎಂದು ಗುರುತಿಸಲಾಗಿದೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ನೆಂಚಾರು ಗ್ರಾಮದ ಕರಬರಬೆಟ್ಟು ಎಂಬಲ್ಲಿಯ ನಿವಾಸಿ ನೀಲಕಂಠ ಕರಬ ಎಂಬವರ ಹಳೆ ಮನೆಯ ಹಿಂಬದಿ ಬಾಗಿಲು ಒಡೆದು ಮನೆಯಲ್ಲಿರುವ ಸುಮಾರು ರೂ 38200 ಮೌಲ್ಯದ ಹಿತ್ತಾಳೆಯ ಪೂಜಾ ಘಂಟೆ, ದೀಪಗಳು ಹಾಗೂ ಕೊಡಪಾನದಂತಹ ಪೂಜಾ ಸಾಮಗ್ರಿಗಳು, ಬೆಳ್ಳಿಯ ಮೂರ್ತಿಯ ಕವಚ ಹಾಗೂ 1 ಗ್ರಾಂ ಚಿನ್ನದ ಪದಕ ಹಾಗೂ ಕಬ್ಬಿಣದ ಗ್ರಹೋಪಯೋಗಿ ವಸ್ತುಗಳು ಕಳ್ಳತನವಾಗಿತ್ತು. ಅಲ್ಲದೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹೆಣ್ಮುಂಜೆ ಗ್ರಾಮದ ಪ್ರಬಾಡಿ ಮೂಲ ಜಟ್ಟಿಗೆ ಮತ್ತು ಬ್ರಹ್ಮ ದೈವಸ್ಥಾನದ ಕಂಚಿನ ಘಂಟೆಗಳು ಮತ್ತು ತೂಕಳಕಗಳು ಕಳವು ಆಗಿದ್ದು ಈ ಬಗ್ಗೆ ಕ್ರಮವಾಗಿ ಕೋಟ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಐ.ಪಿ.ಎಸ್, ರವರ ನಿರ್ದೇಶನದಂತೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸುಧಾಕರ ನಾಯ್ಕ ರವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ಬ್ರಹ್ಮಾವರ ಅನಂತ ಪದ್ಮನಾಭ ಇವರ ನೇತೃತ್ವದಲ್ಲಿ, ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ ದೇವಸ್ಥಾನದ ಘಂಟೆಗಳು, ದೀಪಗಳು ಹಾಗೂ ಇನ್ನಿತರ ಪೂಜಾ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ
ಕಾರ್ಯಾಚರಣೆಯಲ್ಲಿ, ಅನಂತ ಪದ್ಮನಾಭ, ವೃತ್ತ ನಿರೀಕ್ಷಕರು ಬ್ರಹ್ಮಾವರ, ಕೋಟ ಪೊಲೀಸ್ ಠಾಣೆಯ ಸಂತೋಷ ಬಿ.ಪಿ ಪಿ.ಎಸ್.ಐ, ಪುಷ್ಪಾ ಅಪರಾಧ ವಿಭಾಗದ ಪಿ.ಎಸ್.ಐ ಮತ್ತು ಪಿ.ಎಸ್.ಐ ಭರತೇಶ್ ಹಾಗೂ ಸಿಬ್ಬಂದಿಗಳಾದ ಸುರೇಶ್ ಶೆಟ್ಟಿ, ಹೆಚ್.ಸಿ, ರಾಜು ಹೆಚ್.ಸಿ, ಸುರೇಶ್ ಹೆಚ್.ಸಿ, ರಾಮ ದೇವಾಡಿಗ ಹೆಚ್.ಸಿ, ಜಯರಾಮ ಪಿ.ಸಿ, ಪ್ರಕಾಶ ಪಿ.ಸಿ, ಕೃಷ್ಣ ಪಿ.ಸಿ, ವಿಕ್ರಮ್ ಪಿ.ಸಿ ಮತ್ತು ಮಂಜುನಾಥ ಎ.ಹೆಚ್.ಸಿ ರವರು ಭಾಗವಹಿಸಿದ್ದರು
